
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಐಟಿ ಕಂಪನಿಗಳು ಸಮಾಜಕ್ಕೆ ನೀಡುವ ಕೊಡುಗೆಯಿಂದ ಸಾಮಾನ್ಯರಿಗೆ ಅನುಕೂಲವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ನ್ಯಾಸ್ಕಾಂ ಹಾಗೂ ಫಾರ್ವರ್ಡ್ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಸಿಎಸ್ ಆರ್ ಪ್ರಾಯೋಜಕರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಮಳೆ ನೀರು ಕೊಯ್ಲು ಯೋಜನೆ ಅತ್ಯಂತ ಉಪಯುಕ್ತ ಹಾಗೂ ಮಹತ್ವದ ಕಾರ್ಯಕ್ರಮ. ಕರ್ನಾಟಕದಲ್ಲಿ ಐಟಿ ಉದ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. 1984 ರಲ್ಲಿ ಮೊದಲ ಐಟಿ ಕಂಪನಿ ಪ್ರಾರಂಭವಾದ ನಂತರ ಬೆಂಗಳೂರು ಹಿಂತಿರುಗಿ ನೋಡಿಯೇ ಇಲ್ಲ. ಇಂದು ಕರ್ನಾಟಕ ಅತಿ ಹೆಚ್ಚು ಸ್ಟಾರ್ಟ್ ಅಪ್, ಯುನಿಕಾರ್ನ್, ಆರ್ ಆಂಡ್ ಸಿ ಸಂಸ್ಥೆಗಳನ್ನು ಹೊಂದಿರುವ ರಾಜ್ಯವಾಗಿದೆ ಎಂದರು.
*ಐಟಿ ಕಂಪನಿಗಳು ನಮಗೆ ಅನುಕೂಲಕರ*
ಪ್ರತಿಯೊಂದು ಐಟಿ ಕಂಪನಿ ಬೆಂಗಳೂರಿನಲ್ಲಿಯೇ ಪ್ರಾರಂಭಿಸಲು ಮುಂದಾಗುತ್ತಾರೆ. ಬೆಂಗಳೂರು 1.25 ಕೋಟಿ ಜನ ಸಂಖ್ಯೆ ಇದೆ. ಪ್ರತಿ ದಿನ ಐದು ಸಾವಿರು ಇಂಜಿನಿಯರ್ ಗಳು ಬೆಂಗಳೂರಿಗೆ ಬರುತ್ತಾರೆ. ಪ್ರತಿ ದಿನ ಸುಮಾರು 5000 ಹೊಸ ಕಾರ್ ಗಳು ರಸ್ತೆ ಗಿಳಿಯುತ್ತವೆ.
ಐಟಿ ಕಂಪನಿಗಳು ನಮಗೆ ಅನುಕೂಲಕರ. ಆದರೆ ಅಷ್ಟೆ ಸಮಸ್ಯೆಗಳೂ ಇವೆ ಎಂದರು.
*ನೆರವು ನೀಡಿ*
ವಿಶ್ವದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಆದರೆ ಭಾರತದಲ್ಲಿ ಆರ್ಥಿಕತೆ ಬೆಳೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಕಾರಾತ್ಮಕ ಪ್ರೇರಣೆ ಕಾರಣವಾಗಿದೆ.
ನೀವು ಸೂಕ್ತ ದೇಶದಲ್ಲಿದ್ದೀರಿ. ಐಟಿ ಸಂಸ್ಥೆಗಳು ದೇಶವೇ ಹೆಮ್ಮೆ ಪಡುವಂತ ಕೆಲಸಗಳಲ್ಲಿ ತೊಡಗಿರುವುದು ಶ್ಲಾಘನೀಯ. ಸಾಧ್ಯವಾದಷ್ಟು ಅಕ್ಕಪಕ್ಕದವರಿಗೆ ಸಹಾಯ ಮಾಡಿ, ಸಹಾಯ ಮಾಡುವವರ ಜೊತೆ ಸರ್ಕಾರ ಇದೆ ಎಂದರು.
ಶಾಸಕ ಅರವಿಂದ ಲಿಂಬಾವಳಿ, ನ್ಯಾಸ್ಕಾಂ ಅಧ್ಯಕ್ಷೆ ದೇಬಜಾನಿ ಘೋಷ್, ಫಾರ್ವರ್ಡ್ ಫೌಂಡೇಶನ್ ನ ಕೃಷ್ಣ ನ್ಯಾಸ್ ಕಾಂ ಪ್ರಾದೇಶಿಕ ಮುಖ್ಯಸ್ಥ ಭಾಸ್ಕರ್ ಕುಮಾರ್ ವರ್ಮಾ ಹಾಗೂ ಸಿ.ಎಸ್.ಆರ್ ಪ್ರಾಯೋಜಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
https://pragati.taskdun.com/karnataka-maharashtra-border-issuesharad-pawarcm-basavaraaj-bommai/