Karnataka NewsPolitics

*ಇದು ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಅಪಶಕುನದ ಸಂಕೇತ ಎಂದ ಸಂಸದ ಕಾರಜೋಳ*

ಪ್ರಗತಿವಾಹಿನಿ ಸುದ್ದಿ: ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್ ಮುರಿದು ಬಿದ್ದು ಕೊಚ್ಚಿ ಹೋಗಿರುವ ಘಟನೆ ಬಗ್ಗೆ ವಿಪಕ್ಷ ನಾಯಕರು ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಮತ್ತೊಂದೆಡೆ ಬಿಜೆಪಿ ಸಂಸದ ಗೋವಿಂದ ಕಾರಜೋಳ ಹೊಸ ಭವಿಷ್ಯವನ್ನೇ ನುಡಿದಿದ್ದಾರೆ.

ತುಂಗಭದ್ರಾ ಡ್ಯಾಂ ಗೇಟ್ ಕಟ್ ಆಗಿರುವ ವಿಚಾರವಾಗಿ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ಇದು ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಅಪಶಕುನದ ಸಂಕೇತ ಎಂದಿದ್ದಾರೆ.

Home add -Advt

ಒಂದು ವರ್ಷದಿಂದ ಸಿಎಂ ಸಿದ್ದರಾಮಯ್ಯ ಸರ್ಕಾರ ಸರಿಯಿಲ್ಲ. ರಾಜ್ಯದ ಆಡಳಿತ ಸರಿಯಾಗಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದು ಹೇಳಿದ್ದಾರೆ.

ಸರ್ಕಾರ ಪೂರ್ಣಾವಧಿ ನೀರಾವರಿ ಸಚಿವರ ನೇಮಕ ಮಾಡಬೇಕಿತ್ತು. ಈಗಿರುವವರು ಪಾರ್ಟ್ ಟೈಂ ನೀರಾವರಿ ಮಂತ್ರಿ. ಆಡಳಿತಕ್ಕಿಂತ ರಾಜಕಾರಣಕ್ಕೆ ಹೆಚ್ಚು ಒತ್ತುಕೊಡುವ ಸ್ಥಿತಿಯಲ್ಲಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಅವರಿಗೆ ಚುನಾವಣೆಗಳಿಗೆ ಹೆಚ್ಚು ಒತ್ತುಕೊಡಬೇಕಾಗಿದೆ. ದೇಶದಲ್ಲಿ ಎಲ್ಲೆಲ್ಲಿ ಚುನಾವಣೆ ನಡೆಯುತ್ತೋ ಅಲ್ಲಿ ಒತ್ತು ಕೊಡಬೇಕಾಗಿದೆ. ಹೀಗಾಗಿ ನೀರಾವರಿ ಇಲಾಖೆ ಅನಾಥವಾಗಿದೆ. ನೀರಾವರಿ ಇಲಾಖೆಗೆ ಪೂರ್ಣಾವಧಿ ಮಂತ್ರಿ ನೇಮಕ ಮಾಡಲಿ ಎಂದು ಒತ್ತಾಯಿಸಿದ್ದಾರೆ.

ತುಂಗಭದ್ರಾ ಡ್ಯಾಂ ನ ನೀರು ವ್ಯರ್ಥವಾಗಿ ಆಂಧ್ರ, ತೆಲಂಗಾಣ ಪಾಲಾಗುತ್ತಿದೆ. ನಮ್ಮ ರೈತರು ಕಣ್ಣೀರು ಹಾಕುವಂತ ಪರಿಸ್ಥಿತಿ ಬಂದಿದೆ. ಸರ್ಕಾರದ ನಿರ್ಲಕ್ಷ್ಯವೇ ಡ್ಯಾಂ ನಲ್ಲಿ ಈ ಘಟನೆ ನಡೆಯಲು ಕಾರಣ ಸರಿಯಾಗಿ ನಿರ್ವಹಣೆ ಮಾಡದೇ ಸರ್ಕಾರ ಭ್ರಷ್ಟಾಚಾರದಲ್ಲಿ ತಲ್ಲೀನವಾಗಿದೆ. ರಾಜ್ಯದ ಜನರ ಕಣ್ಣೀರಿನ ಶಾಪ ಸಿದ್ದರಾಮಯ್ಯನವರ ಸರ್ಕಾರಕ್ಕೆ ತಟ್ಟಲಿದೆ. ಕಣ್ಣೀರಲ್ಲೇ ಸಿಎಂ ಸಿದ್ದರಾಮಯ್ಯ ಸರ್ಕಾರ ಕೊಚ್ಚಿ ಹೋಗುವ ಕಾಲ ಬಂದಿದೆ ಎಂದು ಕಿಡಿಕಾರಿದ್ದಾರೆ.

Related Articles

Back to top button