Latest

ಹುತಾತ್ಮ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ವೇತನಕ್ಕೆ ಸರ್ಕಾರ ತಡೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 2014ರಲ್ಲಿ ಕಲಬುರ್ಗಿಯಲ್ಲಿ ಪಾತಕಿಗಳ ಗುಂಡೇಟಿಗೆ ಬಲಿಯಾಗಿದ್ದ ಹುತಾತ್ಮ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ವೇತನಕ್ಕೆ ಸರ್ಕಾರ ತಡೆ ನೀಡಿದೆ. ಇದರಿಂದ ಕುಟುಂಬ ಸಂಕಷ್ಟಕ್ಕೀಡಾಗಿದೆ.

2014 ಜನವರಿ 8ರಂದು ಕಲಬುರ್ಗಿ ನಗರದ ರೋಜಾ ಪ್ರದೇಶದಲ್ಲಿ ಪಾತಕಿ ಮುನ್ನಾನನ್ನು ಹಿಡಿಯಲು ಹೋದಾಗ ನಡೆದ ಗುಂಡಿನ ಕಾಳಗದಲ್ಲಿ ಪಿಎಸ್ ಐ ಮಲ್ಲಿಕಾರ್ಜುನ ಬಂಡೆ ಮೃತಪಟ್ಟಿದ್ದರು. ಈ ವೇಳೆ ಅಂದಿನ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರು ಮಲ್ಲಿಕಾರ್ಜುನ ಬಂಡೆ ಮಕ್ಕಳು ಚಿಕ್ಕವರಾಗಿರುವುದರಿಂದ ಕುಟುಂಬಕ್ಕೆ ಅವರು ನಿವೃತ್ತರಾಗುವವರೆಗಿನ ವೇತನ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸುವುದಾಗಿ ವಾಗ್ದಾನ ಮಾಡಿದ್ದರು.

ಅದರಂತೆ ಬಂಡೆ ಮಕ್ಕಳಿಗೆ 50 ಲಕ್ಷ ಹಣ 50X60 ಸೈಟ್ ಸರ್ಕಾರ ನೀಡಿದೆ. ಆದರೆ ವೇತನ ನೀಡುವ ವಿಚಾರದಲ್ಲಿ ಮಾತ್ರ ಸರ್ಕಾರ ಗೊಂದಲಕ್ಕೆ ಸಿಲುಕಿದೆ. ಇದರ ಜೊತೆಗೆ ಮಕ್ಕಳ ಶಾಲಾ ವಿದ್ಯಾಭ್ಯಾಸಕ್ಕಾಗಿ 12 ಸಾವಿರ ಫೀಸ್ ಸರ್ಕಾರ ನೀಡುತ್ತಿತ್ತು. ಮಲ್ಲಿಕಾರ್ಜುನ ಬಂಡೆ ನಿಧನದ ಬಳಿಕ ಕೆಲವೇ ವರ್ಷಗಳಲ್ಲಿ ಅವರ ಪತ್ನಿ ಮಲ್ಲಮ್ಮ ಕೂಡ ಮೃತಪಟ್ಟಿದ್ದರು. ಇದರಿಂದ ಅವರ ಇಬ್ಬರು ಅಪ್ರಾಪ್ತ ಮಕ್ಕಳನ್ನು ಕುಟುಂಬದವರೇ ನೋಡಿಕೊಳ್ಳುತ್ತಿದ್ದಾರೆ. ಬಂಡೆ ನಿಧನದ ಬಳಿಕ ಸರ್ಕಾರ ತನ್ನ ಮಾತಿನಂತೆ ಮೂಲ ವೇತನ 32,226 ರೂಪಾಯಿ ಹಣವನ್ನು ಕುಟುಂಬದವರಿಗೆ ನೀಡುತ್ತಿತ್ತು. ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಕುಟುಂಬದವರು ಮಕ್ಕಳ ಹೆಸರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ, ಜೀವ ವಿಮೆ ಪಾಲಿಸಿ ಮಾಡಿಸಿದ್ದರು. 2019ರ ಅಕ್ಟೋಬರ್ ತಿಂಗಳವರೆಗೆ ಪ್ರತಿ ತಿಂಗಳು ಚೆಕ್ ಮೂಲಕ ಹಣವನ್ನು ನೀಡಲಾಗುತ್ತಿತ್ತು. ಆದರೆ 2019ರ ನವೆಂಬರ್ ನಿಂದ ಇಲ್ಲಿಯವರೆಗಿನ ವೇತನವನ್ನು ಸರ್ಕಾರ ನೀಡದೇ ತಡೆ ಹಿಡಿದಿದೆ.

ಸರ್ಕಾರ 13 ಲಕ್ಷಕ್ಕೂ ಅಧಿಕ ಹಣ ಬಾಕಿ ಉಳಿಸಿಕೊಂಡಿದ್ದು, ಹಣ ಬಿಡುಗಡೆ ಮಾಡುವಂತೆ ಬಂಡೆ ಕುಟುಂಬದವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ವೇತನ ಬಿಡುಗಡೆಗೆ ತಂತ್ರಾಂಶ ಅಡ್ಡಿಯಾಗಿದೆ ಎಂದು ಹೇಳಲಾಗುತ್ತಿದೆ.

Home add -Advt

Related Articles

Back to top button