ಬಿಎಸ್ ವೈ ಇಲ್ಲದೇ ಬಿಜೆಪಿ ಇಲ್ಲ; ಬಿಜೆಪಿ ಇಲ್ಲದೇ ಬಿಎಸ್ ವೈ ಇಲ್ಲ; ವಿಜಯೇಂದ್ರ ಹೀಗೆ ಹೇಳಿದ್ದೇಕೆ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿ.ವೈ.ವಿಜಯೇಂದ್ರಗೆ ಬಿಜೆಪಿ ಟಿಕೆಟ್ ಕೈತಪ್ಪಿದ ವಿಚಾರ ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ವಿಜಯೇಂದ್ರ, ಸ್ಥಾನಮಾನದ ಬಗ್ಗೆ ನಾಯಕರು ನಿರ್ಧರಿಸುತ್ತಾರೆ. ಟಿಕೆಟ್ ಸಿಕ್ಕಿಲ್ಲ ಎಂದು ಯಾವುದೇ ಬೇಸರವಿಲ್ಲ, ಮತ್ತಷ್ಟು ಪಕ್ಷ ಸಂಘಟನೆಯತ್ತ ಗಮನ ಹರಿಸುತ್ತೇನೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ನನಗೆ ಟಿಕೆಟ್ ಸಿಕ್ಕಿಲ್ಲ ಎಂದು ಯಾವುದೇ ಬೇಸರವಿಲ್ಲ. ಟಿಕೆಟ್ ವಿಚಾರದಲ್ಲಿ ಯಡಿಯೂರಪ್ಪ ಆಗಲಿ, ರಾಜ್ಯ ನಾಯಕರುಗಳಾಗಲಿ ಯಾವುದೇ ಲಾಭಿ ನಡೆಸಿಲ್ಲ. ಕೇಂದ್ರ ನಾಯಕರೇ ನಿರ್ಧರಿಸಿ ಟಿಕೆಟ್ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಇನ್ನೂ ಹೆಚ್ಚಿನ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.
ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿ.ಎಲ್.ಸಂತೋಷ್ ಹೆಸರು ತರುತ್ತಿರುವುದು ಸರಿಯಲ್ಲ. ಸಂತೋಷ್ ಅಥವಾ ಬೇರೆ ಯಾವುದೇ ನಾಯಕರನ್ನು ಎಳೆದು ತರುವ ಅಗತ್ಯವಿಲ್ಲ, ಇದರಲ್ಲಿ ಯಾವ ನಾಯಕರ ಪಾತ್ರವೂ ಇಲ್ಲ. ಕೇಂದ್ರ ನಾಯಕರೇ ಟಿಕೆಟ್ ಅಂತಿಮಗೊಳಿಸಿದ್ದಾರೆ ಎಂದು ಹೇಳಿದರು.
ಇನ್ನು ಯಡಿಯೂರಪ್ಪನವರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಯಡಿಯೂರಪ್ಪ ಶಕ್ತಿ ಏನೆಂಬುದು ಇಡೀ ರಾಜ್ಯಕ್ಕೆ ಗೊತ್ತು. ಬಿಜೆಪಿ ಇಲ್ಲದೇ ಬಿಎಸ್ ವೈ ಇಲ್ಲ, ಬಿಎಸ್ ವೈ ಇಲ್ಲದೇ ಬಿಜೆಪಿ ಇಲ್ಲ ಎಂದು ಹೇಳಿದರು.
ಪ್ರಕಾಶ ಹುಕ್ಕೇರಿ, ಸುನೀಲ ಸಂಕ ನಾಮಪತ್ರ ಸಲ್ಲಿಕೆ




