Latest

ಜಿಲ್ಲಾ ಪಂಚಾಯಿತಿ ಕಟ್ಟಡಕ್ಕೆ ಬೆಂಕಿ: 15 ಲಕ್ಷ ರೂ. ಹಾನಿ

ಪ್ರಗತಿವಾಹಿನಿ ಸುದ್ದಿ, ಕಾರವಾರ – ಇಲ್ಲಿಯ ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ಶನಿವಾರ ಸಂಭವಿಸಿದ ಬೆಂಕಿ ಆಕಸ್ಮಿಕದಿಂದ 15 ಲಕ್ಷ ರೂ. ಹಾನಿ ಉಂಟಾಗಿದೆ. ಆದರೆ ಕಚೇರಿ ದಾಖಲೆಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ.

ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಪ್ರಿಯಾಂಗ್ ಎಂ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

 ಶಾರ್ಟ್ ಸರ್ಕ್ಯೂಟ್ ನಿಂದಾಗಿ ಶನಿವಾರ ಬೆಳಗ್ಗೆ ಬೆಂಕಿ ಆಕಸ್ಮಿಕ ಸಂಭವಿಸಿತ್ತು. ಕಟ್ಟಡದಿಂದ ಹೊಗೆ ಬರುತ್ತಿರುವುದನ್ನು ನೋಡಿದ ಸುತ್ತಲಿನ ನಿವಾಸಿಗಳು ಅಗ್ನಿಶಾಮಕ ದಳದವರಿಗೆ  ಮಾಹಿತಿ ನೀಡಿದ್ದರು. ಆದರೆ ಆಗಲೇ ಕಟ್ಟಡದ ಮೂರೂ ಮಹಡಿಗೆ ಬೆಂಕಿ ಆವರಿಸಿತ್ತು. ಕಟ್ಟಡದೊಳಗೆ ವಿಪರೀತ ಹೊಗೆ ತುಂಬಿಕೊಂಡಿದ್ದು ಬೆಂಕಿ ಆರಿಸುವ ಕಾರ್ಯಕ್ಕೆ ಅಡ್ಡಿಯಾಯಿತು. ಗಂಟೆಗಟ್ಟಲೆ ಪ್ರಯತ್ನಿಸಿ ಬೆಂಕಿಯನ್ನು ನಿಯಂತ್ರಿಸಲಾಯಿತು.

ವಿಡಿಯೋ ಕಾನರೆನ್ಸ್‌ಗಳು ನಡೆಯುವ ಕೆ-ಸ್ವಾನ್ ಹಾಲ್‌ನಲ್ಲಿ ಹೆಚ್ಚು ಹಾನಿಯಾಗಿದೆ. ಇಲ್ಲಿ ನಿರ್ಮಾಣಕ್ಕೆ ಫ್ಲೈ ವುಡ್‌ಗಳನ್ನು ಬಳಸಿರುವುದರಿಂದ ಬೆಂಕಿ ವೇಗವಾಗಿ ವ್ಯಾಪಿಸಿಕೊಂಡಿದೆ. ಇಲ್ಲಿದ್ದ ಟಿವಿ, ಪ್ರಾಜೆಟಕ್ಟರ್, ಪೀಠೋಪಕರಣ ಮೊದಲಾದ ವಸ್ತುಗಳು ಸಂಪೂರ್ಣ ಭಸ್ಮವಾಗಿವೆ. ಉಳಿದಂತೆ ಮೊದಲ ಅಂತಸ್ಥಿನಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಅಕ್ಷರ ದಾಸೋಹ ಕಚೇರಿ, ಮೂರನೇ ಅಂತಸ್ಥಿನಲ್ಲಿರುವ ದಾಖಲೆಗಳ ಕೊಠಡಿಗೆ ಹೆಚ್ಚಿನ ಹಾನಿ ಸಂಭವಿಸಿಲ್ಲ, ದಾಖಲೆಗಳು ಸಹ ಸಂಪೂರ್ಣ ಸುರಕ್ಷಿತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಟ್ಟಡದಲ್ಲಿಯೂ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಅವಘಡ ಸಂಭವಿಸಿತ್ತು. ಆಗ ಸಿಇಒ ಕ್ಯಾಬಿನ್ ಸಂಪೂರ್ಣ ಭಸ್ಮವಾಗಿತ್ತು.

Home add -Advt

ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ಬೆಂಕಿ; ಮೂರೂ ಅಂತಸ್ಥಿಗೆ ಆವರಿಸಿರುವ ಕೆನ್ನಾಲಿಗೆ

Related Articles

Back to top button