
ಪ್ರಗತಿವಾಹಿನಿ ಸುದ್ದಿ: ಮೊಬೈಲ್ ಗೀಳಿಗೆ 13 ವರ್ಷದ ಬಾಲಕ ಬಲಿಯಾಗಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.
ದ್ರುವ ಆತ್ಮಹತ್ಯೆಗೆ ಶರಣಾಗಿರುವ 13 ವರ್ಷದ ಬಾಲಕ. 9 ವರ್ಷದ ತಂಗಿಯ ಮುಂದೆ ಉಡದಾರದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಣ್ಣ ಏನು ಮಾಡುತ್ತಿದ್ದನೆ ಎಂಬ ಅರಿವೂ ಇಲ್ಲದೇ ತಂಗಿ ನೋಡುತ್ತಲೇ ನಿಂತಿದ್ದಳು.
ಪೋಷಕರು ಕೆಲಸಕ್ಕೆ ಹೋಗಿದ್ದ ವೇಳೆ ಶಾಲೆಯಿಂದ ಮನೆಗೆ ಬಂದ ಬಾಲಕ ದ್ರುವ ಹಾಗೂ ಆತನ ತಂಗಿ ಇಬ್ಬರು ಆಟವಾಡಲು ಮುಂದಾಗಿದ್ದಾರೆ. ಈ ವೇಳೆ ದ್ರುವ ಏಕಾಏಕಿ ತನ್ನ ಸೊಂಟದಲ್ಲಿದ್ದ ಉಡದಾರ ತೆಗೆದು ಫ್ಯಾನ್ ಗೆ ಕಟ್ಟಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಉಡದಾರ ತುಂಡಾಗಿ ಕೆಳಗೆ ಬಿದ್ದಿದ್ದಾನೆ. ಅಣ್ಣ ಹೀಗೇಕೆ ಮಾಡುತ್ತಿದ್ದಾನೆ ಎಂದು ಗೊಂದಲದಲ್ಲಿ ತಂಗಿ ನೋಡುತ್ತಲೇ ನಿಂತಿದ್ದಳು. ಕೆಳಗೆ ಬಿದ್ದ ಬಾಲಕ ಮೇಲೇಳಲೇ ಇಲ್ಲ. ಈ ವೇಳೆ ತಾಯಿ ಕೆಲಸದಿಂದ ಮನೆಗೆ ಬಂದಿದ್ದಾಳೆ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ತಪಾಸಣೆ ನಡೆಸಿದ ವೈದ್ಯರು ಬಾಲಕ ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ. ಬಾಲಕ ದ್ರುವ ಪೋಷಕರ ಮಾತು ಕೇಳದೇ ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದ. ಅತಿಯಾದ ಮೊಬೈಲ್ ಗೀಳಿನಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.