
ಪ್ರಗತಿ ವಾಹಿನಿ ಸುದ್ದಿ ಮೈಸೂರು:
ಕೋವಿಡ್ ಹೆಸರಲ್ಲಿ ಕೆಲವರು ಹಣ ಲೂಟಿ ಮಾಡುತ್ತಿದ್ದಾರೆ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ಸರಕಾರದ ಧೋರಣೆಗಳ ವಿರುದ್ಧ ಕಿಡಿಕಾರಿದ್ದಾರೆ. ಸರಕಾರದ ನಡೆ ಖಾಸಗಿ ಆಸ್ಪತ್ರೆಯವರಿಗೆ ಅನುಕೂಲ ಮಾಡಿದಂತಾಗಿದೆ. ಇದರಿಂದ ಜನರ ಹಣ ಲೂಟಿಯಾಗುತ್ತಿದೆ. ಕೋವಿಡ್ ಹೆಸರಿನಲ್ಲಿ ಅಪಾರ ಭ್ರಷ್ಟಾಚಾರ ನಡೆದಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಈ ಲೂಟಿಯನ್ನು ತಡೆಯಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೋವಿಡ್ ತಡೆಗೆ ನಿರ್ಬಂಧಗಳನ್ನು ವಿಧಿಸಲಿ. ಆದರೆ ಲಾಕ್ ಡೌನ್, ರಾತ್ರಿ ಕರ್ಫ್ಯೂ ಮೊದಲಾದ ಕ್ರಮಗಳಿಂದ ಮಧ್ಯಮ ಮತ್ತು ಬಡ ಜನರಿಗೆ ಜೀವನ ನಡೆಸುವುದೇ ಕಷ್ಟವಾಗುತ್ತದೆ. ಆಯಾ ಪ್ರದೇಶ, ಜಿಲ್ಲೆಗಳಲ್ಲಿ ಕೋವಿಡ್ ಸ್ಥಿತಿಗತಿ ನೋಡಿಕೊಂಡು ಆ ಜಿಲ್ಲೆಗಷ್ಟೇ ಸೀಮಿತವಾಗಿ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿರ್ಧಾರ ಕೈಗೊಳ್ಳುವ ಅಧಿಕಾರ ಡಿಸಿಗಳಿಗೆ ಕೊಡಬೇಕು ಎಂದರು.
ಕೋವಿಡ್ ನೆಪದಲ್ಲಿ ವಿಪರೀತ ಅವ್ಯವಹಾರ ಆಗುತ್ತಿದೆ. ಜನರಿಗೆ ಹೊರೆಯಾಗುವಂತಹ ಯಾವುದೇ ನಿರ್ಣಯ ಬೇಡ. ಸುರಕ್ಷಿತವಾಗಿ ಬದುಕೋದು ಜನರಿಗೆ ಗೊತ್ತಿದೆ. ಬಲವಂತದ ಹೇರಿಕೆಗಳು ಬೇಡ. ಪ್ರಧಾನಿ ಮೋದಿ ಹೇಳಿದಂತೆ ಜನರ ಜೀವ ಹಾಗೂ ಜೀವನ ಎರಡೂ ಮುಖ್ಯ . ಕೊರೊನಾ ಜತೆಗೆ ಜೀವನ ಸಾಗಿಸಲೇ ಬೇಕು. ಜನರ ಜೀವನಕ್ಕೆ ತೊಂದ್ರೆಯಾದರೆ ಅದನ್ನು ಸರಿಪಡಿಸುವ ಜವಾಬ್ದಾರಿಯೂ ಸರಕಾರದ್ದೇ ಆಗಿರುತ್ತದೆ. ಹೀಗಾಗಿ ಜನರ ಹಿತದೃಷ್ಟಿ ಕಾಪಾಡಬೇಕಾಗಿರೋದು ಸರ್ಕಾರದ ಕರ್ತವ್ಯ ಎಂದರು.
ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿ ಜನ ಮಾತ್ರ ಬರಬಾರದು ಎಂಬ ವಿಚಿತ್ರ ಆದೇಶಗಳನ್ನು ಸರಕಾರ ಹೊರಡಿಸುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇಲ್ಲಸಲ್ಲದ್ದನ್ನು ಹೇಳಿ ಜನರನ್ನು ಗಾಬರಿಗೊಳಿಸಬೇಡಿ ಎಂದರು.
ಬೆಳಗಾವಿಯಲ್ಲಿ ಮತ್ತೆ ಕೊರೊನಾ ಸ್ಫೋಟ