
ಪ್ರಗತಿ ವಾಹಿನಿ ಸುದ್ದಿ, ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಅಮೀರ್ ಖಾನ್ ಅವರ ಬಹು ನಿರೀಕ್ಷೆಯ ಲಾಲ್ ಸಿಂಗ್ ಛಡ್ಡಾ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ನಡೆದ ಬೈಕಾಟ್ ಅಭಿಯಾನದಿಂದ ಮಕಾಡೆ ಮಲಗಿದೆ.
ಈ ವಿದ್ಯಮಾನದ ಬೆನ್ನಿಗೇ ಈಗ ಅಮೀರ್ ಸುತ್ತ ಮತ್ತೊಂದು ವಿವಾದ ಸುತ್ತಿಕೊಂಡಿದೆ. ಅಮೀರ್ ಖಾನ್ ನಟಿಸಿರುವ ಜಾಹೀರಾತೊಂದರಲ್ಲಿ ಹಿಂದೂ ಸಂಪ್ರದಾಯವನ್ನು ಲೇವಡಿ ಮಾಡಲಾಗಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವರು ಆರೋಪಿಸಿದ್ದಾರೆ.
ಅಮೀರ್ ಖಾನ್ ಚಿತ್ರಗಳೆಂದರೆ ಸಿನಿ ಪ್ರಿಯರು ವರ್ಷಗಟ್ಟಲೇ ಕಾದು ನೋಡುವ ದಿನವಿತ್ತು. ಅಮೀರ್ ಖಾನ್ ಸಹ ತಮ್ಮ ಮನೋಜ್ಞ ಅಭಿನಯ ಹಾಗೂ ಹೊಸ ಆಲೋಚನೆಗಳ ಚಿತ್ರದಿಂದ ಬಾಲಿವುಡ್ ನಲ್ಲಿ ಮೇರು ನಟ ಎಂಬ ಖ್ಯಾತಿಯನ್ನೂ ಗಳಿಸಿದ್ದಾರೆ.
ಆದರೆ ಅಮೀರ್ ಖಾನ್ ಕೆಲ ವರ್ಷಗಳ ಹಿಂದೆ ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ, ತನ್ನ ಪತ್ನಿ ದೇಶ ತೊರೆಯುವ ಇಚ್ಚೆ ವ್ಯಕ್ತಪಡಿಸಿದ್ದಾಳೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾದರು. ಅಷ್ಟೇ ಅಲ್ಲದೆ ಅವರು ಅಭಿನಯಿಸಿದ, ಇತ್ತೀಚೆಗೆ ಬಿಡುಗಡೆಯಾದ ಬಹು ನಿರೀಕ್ಷಿತ ಚಿತ್ರ ಲಾಲ್ ಸಿಂಗ್ ಚಡ್ಡಾ ವಿರುದ್ಧ ಬೈಕಾಟ್ ಅಭಿಯಾನ ನಡೆದು ಅಮೀರ್ ಸೋಲಿನ ರುಚಿ ಅನುಭವಿಸಿದರು.
ಇದರ ಬೆನ್ನಿಗೇ ಅಮೀರ್ ಖಾನ್ ನಟಿಸಿದ ಬ್ಯಾಂಕ್ ಒಂದರ ಜಾಹೀರಾತು ವಿವಾಧಕ್ಕೆ ಎಡೆಮಾಡಿಕೊಟ್ಟಿದೆ. ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಲ್ಲಿ ನವದಂಪತಿ ವರನ ಸ್ವ ಗೃಹಕ್ಕೆ ಬರುತ್ತಾರೆ, ಈ ವೇಳೆ ವಧು ಬಲಗಾಲಿಟ್ಟು ಗಂಡನ ಮನೆಯನ್ನು ಪ್ರವೇಶಿಸುತ್ತಾಳೆ. ಆದರೆ ಈ ಜಾಹೀರಾತಿನಲ್ಲಿ ವರನೇ ವಧುವಿನ ಮನೆಗೆ ಬಂದು ಬಲಗಾಲಿಟ್ಟು ಒಳಬಂದಂತೆ ತೋರಿಸಲಾಗಿದೆ.
ಮಧ್ಯ ಪ್ರದೇಶದ ಗೃಹಸಚಿವ ನರೋತ್ತಮ್ ಮಿಶ್ರಾ ಅವರು ಅಮೀರ್ ಖಾನ್ ರ ಈ ಜಾಹೀರಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂಥಹ ಪ್ರಮಾದಗಳನ್ನು ಅಮೀರ್ ಖಾನ್ ಮೇಲಿಂದ ಮೇಲೆ ಮಾಡುತ್ತಲೇ ಇದ್ದಾರೆ. ಅಮೀರ್ ಖಾನ್ ಅವರು ಇಂಥಹ ಸೂಕ್ಷ್ಮ ವಿಷಯಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ಸಚಿವ ಮಿಶ್ರಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಜನವರಿ 6, 7 ಹಾಗೂ 8 ರಂದು ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಘೋಷಣೆ