
ಪ್ರಗತಿವಾಹಿನಿ ಸುದ್ದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಆರ್ ಸಿಬಿ ಅಭಿಮಾನಿಗಳು ಸಾವನ್ನಪ್ಪಿದ ದುರಂತಕ್ಕೆ ಸಂಬಂಧಿಸಿದಂತೆ ಸ್ಫೋಟಕ ತಿರುವು ಸಿಕ್ಕಿದೆ.
ದುರಂತ ಹೇಗಾಯ್ತು? ಕಾರಣವೇನು? ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಡಿಪಿಆರ್ ಎ ಕಾರ್ಯದರ್ಶಿ ನಿರ್ಲಕ್ಷ್ಯ ಬಯಲಿಗೆ ಬಂದಿದೆ.
ಘಟನೆಗೆ ಡಿಪಿಆರ್ ಎ ಕಾರ್ಯದರ್ಶಿ ಸತ್ಯವತಿ ನಿರ್ಲಕ್ಷವೇ ಕಾರಣ ಎಂಬುದು ಬೆಳಕಿಗೆ ಬಂದಿದೆ. ವಿಧಾನಸೌಧದ ಭದ್ರತಾ ವಿಭಾಗದ ಡಿಸಿಪಿ ಜೂನ್ 3ರಂದು ಅಪಾಯದ ಎಚ್ಚರಿಕೆ ನೀಡಿದ್ದರು. ಇದನ್ನು ಡಿಪಿಆರ್ ಎ ನಿರ್ಲಕ್ಷ್ಯ ಮಾಡಿರುವುದು ಬಟಾಬಯಲಾಗಿದೆ.
ವಿಧಾನಸೌಧದ ಭದ್ರತಾ ವಿಭಾಗದ ಡಿಸಿಪಿ ಕರಿಬಸವನಗೌಡ ಜೂನ್ 3ರಂದೇ ಡಿಪಿಆರ್ ಎ ಕಾರ್ಯದರ್ಶಿಗೆ ಪತ್ರ ಬರೆದು ಭದ್ರತಾ ಸಿಬ್ಬಂದಿ ಕೊರತೆ ಇದೆ. ಅಲ್ಲದೇ ಇತರ ಅಪಾಯದ ಬಗ್ಗೆಯೂ ಎಚ್ಚರಿಕೆ ನೀಡಿ ಪತ್ರ ಬರೆದಿದ್ದರು. ಕೆ ಎಸ್ ಸಿಎ ಅನುಮತಿ ಕೇಳಿ ಪತ್ರ ಬರೆದ ಬೆನ್ನಲ್ಲೇ ಡಿಸಿಪಿಗೆ ಅಭಿಪ್ರಾಯ ಕೇಳಲಾಗಿತ್ತು.
ಈ ಹಿನ್ನೆಲೆಯಲ್ಲಿ ಜೂನ್ 3ರಂದೇ ಡಿಸಿಪಿ ಕರಿಬಸವನಗೌಡ ಪತ್ರ ಬರೆದು ಅಭಿಪ್ರಾಯ ತಿಳಿಸಿದ್ದರು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬರುವ ಕಾರಣ ಭದ್ರತೆಗೆ ತೊಂದರೆಯಾಗಲಿದೆ. ಹೊರಗಡೆಯಿಂದ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನಿಯೋಜಿಸಿಕೊಳ್ಳಬೇಕು. ಹೀಗಾಗಿ ಕಾಲವಕಾಶ ಬೇಕು ಎಂದು ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದರು.
ಆದಾಗ್ಯೂ ಡಿಪಿಆರ್ ಸತ್ಯವತಿ ಡಿಸಿಪಿ ಅವರ ಎಚ್ಚರಿಕೆಯನ್ನೂ ನಿರ್ಲಕ್ಷ್ಯ ಮಾಡಿ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಾರೆ. ಅಲ್ಲದೇ ಜೂನ್ 4ರಂದು ಅಭಿಮಾನಿಗಳು, ಸಾರ್ವಜನಿಕರಿಗೆ ವಿಧಾನಸೌಧದ ಬಳಿ ಕಾರ್ಯಕ್ರಮಕ್ಕೆ ಅವಕಾಶವಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ಎಂದು ಮಾದ್ಯಮಗಳ ಮುಂದೆ ಹೇಳಿಕೆಯನ್ನು ನೀಡಿದ್ದಾರೆ.
ಇದರೊಂದಿಗೆ ಮೇಲ್ನೋಟಕ್ಕೆ ಡಿಪಿಆರ್ ಎ ಕಾರ್ಯದರ್ಶಿ ಸತ್ಯವತಿ ನಿರ್ಲಕ್ಷ್ಯ ಬಹಿರಂಗವಾಗಿದೆ.