
ಪ್ರಗತಿವಾಹಿನಿ ಸುದ್ದಿ: ರಣ ಬಿಸಿಲ ಝಳಕ್ಕೆ ಒಂದೇ ಸಮನೆ ಏರಿಕೆಯಾಗುತ್ತಿರುವ ತಾಪಮಾನ, ಹೀಟ್ ಸ್ಟ್ರೋಕ್ ನಿಂದ 16 ಜನರು ಸಾವನ್ನಪ್ಪಿರುವ ದಾರುಣ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಈ ಬಗ್ಗೆ ತೆಲಂಗಾಣ ಕಂದಾಯ ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದ್ದಾರೆ. ರಾಜ್ಯಾದ್ಯಂತ ಬಿಸಿಗಾಳಿಯಿಂದಾಗಿ ಹೀಟ್ ಸ್ಟ್ರೋ ಸಂಭವಿಸಿ 16 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳೊಂದಿಗೆ ಬಿಸಿಗಾಳಿಯ ಪರಿಸ್ಥಿತಿಯನ್ನು ಪರಿಶೀಲಿಸಿದ ಸಚಿವರು, ಜಿಲ್ಲಾಧಿಕಾರಿಗಳು ಸಲ್ಲಿಸಿದ ವರದಿಗಳ ಆಧಾರದ ಮೇಲೆ ಏಳು ಜಿಲ್ಲೆಗಳಿಂದ ಈ ಸಾವುಗಳು ವರದಿಯಾಗಿವೆ ಎಂದು ಹೇಳಿದರು.
ಜಯಶಂಕರ್ ಭೂಪಾಲಪಲ್ಲಿಯಲ್ಲಿ 4 ಸಾವುಗಳು ವರದಿಯಾಗಿವೆ, ವಾರಂಗಲ್ ಅರ್ಬನ್, ಕರೀಂನಗರ ಮತ್ತು ನಿಜಾಮಾಬಾದ್ನಲ್ಲಿ ತಲಾ 3 ಸಾವುಗಳು ಸಂಭವಿಸಿವೆ. ಜೋಗುಳಂಬ ಗಡ್ವಾಲ್, ರಂಗಾ ರೆಡ್ಡಿ ಮತ್ತು ಸೂರ್ಯಪೇಟೆಯಲ್ಲಿ ತಲಾ 1 ಸಾವು ವರದಿಯಾಗಿದೆ.
ಬಿಸಿಗಾಳಿಯಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಲಿದೆ ಎಂದು ಸಚಿವರು ತಿಳಿಸಿದ್ದಾರೆ.
ತೆಲಂಗಾಣದ 16 ಜಿಲ್ಲೆಗಳಲ್ಲಿ 46 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ಉಷ್ಣತೆ ದಾಖಲಾಗಿದ್ದು, ರಾಜ್ಯ ಸರ್ಕಾರ ಜನರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.