
ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ಬಾಲಕಿ ನಾಪತ್ತೆ ಪ್ರಕರಣ ಆಘಾತಕಾರಿ ತಿರುವು ಪಡೆದುಕೊಂಡಿದೆ. ಮಗಳನ್ನೇ ಹತ್ಯೆಗೈದ ತಂದೆ ಶವವನ್ನು ಹೂತಿಟ್ಟು, ಮಗಾಳು ನಾಪತ್ತೆಯಾಗಿದ್ದಾಗಿ ದೂರು ನೀಡಿರುವುದು ತನಿಖೆಯಲ್ಲಿ ಬಯಲಾಗಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿಂಬೆಮರದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 17 ವರ್ಷದ ಮೇಘನಾ ತಂದೆಯಿಂದಲೇ ಕೊಲೆಯಾದ ಬಾಲಕಿ. ತಿಮ್ಮರಾಯಪ್ಪ ಮಗಳನ್ನೆ ಕೊಲೆಗೈದ ತಂದೆ.
ಮಗಳು ಮೇಘನಾ ತಾಯಿ ನಿರ್ಮಲಾ ಸಂಬಂಧಿಯೊಬ್ಬನನ್ನು ಪ್ರೀತಿಸಿದ್ದು, ಆತನನ್ನೇ ವಿವಾಹವಾಗುವುದಾಗಿ ಹಠ ಹಿಡಿದ್ದಳು. ಆದರೆ ತಂದೆ ತಿಮ್ಮರಾಯಪ್ಪಗೆ ತನ್ನ ಪತ್ನಿಯ ಸಂಬಂಧಿಯೊಂದಿಗೆ ಮಗಳ ಲವ್, ಮದುವೆ ವಿಚಾರ ಇಷ್ಟವಿರಲಿಲ್ಲ. ತಾನು ಈ ಮದುವೆಗೆ ಒಪ್ಪಲ್ಲ ಎಂದು ತಿಮರಾಯಪ್ಪ ಹೇಳಿದ್ದನಂತೆ. ಆದರೂ ಮಗಳು ಆತನನ್ನೇ ವಿವಾಹವಾಗುವುದಾಗಿ ಪಟ್ಟು ಹಿಡಿದಿದ್ದಳು.
ಇದರಿಂದ ಕೋಪಗೊಂಡಿದ್ದ ತಿಮ್ಮರಾಯಪ್ಪ, ಏಪ್ರಿಲ್ 16ರಂದು ಮಗಳನ್ನು ಜಮೀನು ಬಳಿ ಮಾತನಾಡಲು ಕರೆಸಿಕೊಂಡಿದ್ದ. ಮಗಳು ಬಂದಾಗ ಆಕೆಯನ್ನು ಬಾವಿಗೆ ತಳ್ಳಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಹಳ್ಳದಲ್ಲಿ ಹೂತು ಹಾಕಿದ್ದ. ಬಳಿಕ ಮರುದಿನ ಮಗಳು ನಾಪತ್ತೆಯಾಗಿದ್ದಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ.
ತನಿಖೆ ನಡೆಸಿದ ಪೊಲೀಸರು ಅನುಮಾನಗೊಂಡು ತಿಮ್ಮರಾಯಪ್ಪನನ್ನೇ ವಶಕ್ಕೆ ಪಡೆದಿ ವಿಚಾರಣೆ ನಡೆಸಿದಾಗ ತಾನೇ ಮಗಳನ್ನು ಕೊಲೆಗೈದು ಹೂತು ಹಾಕಿದ್ದಾಗಿ ಬಾಯ್ಬಿಟ್ಟಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


