*ಶೀಘ್ರದಲ್ಲೇ ಮಹಿಳಾ ಸಚಿವರ ನೇಮಕ: ಸಚಿವ ಲಕ್ಷ್ಮಣ ಸವದಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಸಚಿವ ಸಂಪುಟದಲ್ಲಿ ಮಹಿಳಾ ಸಚಿವರ ನೇಮಕ ಬಹುತೇಕ ಶೀಘ್ರದಲ್ಲೇ ಆಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಿಂತನೆ ನಡೆಸುತ್ತಿದ್ದಾರೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.
ಬೆಳಗಾವಿಯ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಜಿಲ್ಲೆಯ ಎಲ್ಲ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. 2028ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದ್ದಾರೆ ಎಂದರು.
ಖಾತೆಗಳ ಬಗ್ಗೆ ಚರ್ಚೆ ಮಾಡಬಾರದು. ಯಾವುದೇ ಖಾತೆ ಸಿಕ್ಕರೂ ಅದನ್ನು ಉತ್ತಮವಾಗಿ ನಿರ್ವಹಿಸಿದರೆ ಆ ಖಾತೆಗೆ ಬೆಲೆ ಬರುತ್ತದೆ ಎಂದರು.
ರಾಜ್ಯ ಸಚಿವ ಸಂಪುಟದಲ್ಲಿ ಮಹಿಳಾ ಸಚಿವರ ನೇಮಕ ಬಹುತೇಕ ಶೀಘ್ರದಲ್ಲೇ ಆಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಿಂತನೆ ನಡೆಸುತ್ತಿದ್ದಾರೆ
ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಗೂಂಡಾಗಳ ರೀತಿಯಲ್ಲಿ ಸ್ಥಾನದಿಂದ ಕಿತ್ತುಹಾಕಲಾಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಸವದಿ, ಹೊರಟ್ಟಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಮುಖ್ಯಮಂತ್ರಿಗಳಿಂದ ಸತ್ಕಾರ ಸ್ವೀಕರಿಸಿ ಅವರು ಗೌರವಯುತವಾಗಿ ಸಭಾಪತಿ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಆಂತರಿಕ ವಿಚಾರ ನನಗೆ ಗೊತ್ತಿಲ್ಲ. ಹೀಗಾಗಿ ಈ ಕುರಿತು ಮಾತನಾಡುವುದಿಲ್ಲ ಎಂದರು.
ಬಿಜೆಪಿ ಬರ ಅಧ್ಯಯನ ಪ್ರವಾಸ ಕೈಗೊಂಡಿರುವುದು ಅವರ ಕರ್ತವ್ಯ. ವಿರೋಧ ಪಕ್ಷವಾಗಿ ಕ್ಷೇತ್ರಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿ, ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರುವುದು ಅವರ ಜವಾಬ್ದಾರಿ. ಅವರು ಹಾಸಿಗೆ ಹಾಸಿಕೊಂಡು ಮಲಗಿಕೊಳ್ಳಲು ಇದ್ದಾರಾ ಎಂದು ಪ್ರಶ್ನಿಸಿದರು.
136 ಶಾಸಕರಿದ್ದರೂ ಸರ್ಕಾರ ಟೇಕಾಫ್ ಆಗಿಲ್ಲ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಬಿಜೆಪಿ ಜೀವಂತವಾಗಿರಬೇಕಾದರೆ ಇಂತಹ ವಿಚಾರಗಳನ್ನು ಚರ್ಚಿಸಲೇಬೇಕು. ಇಲ್ಲದಿದ್ದರೆ ಕೋಮಾಗೆ ಹೋಗುತ್ತಾರೆ. 2028ರಲ್ಲಿ ವಿರೋಧ ಪಕ್ಷದಲ್ಲೂ ಕೂರಲು ಅವಕಾಶ ಸಿಗದ ಪರಿಸ್ಥಿತಿ ಬರಬಹುದು. ಇರುವ ಸ್ಥಾನಗಳನ್ನಾದರೂ ಉಳಿಸಿಕೊಳ್ಳಲು ಬಿಜೆಪಿ ನಾಯಕರು ಓಡಾಡಬೇಕಾಗುತ್ತದೆ ಎಂದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆಯಂತೆ ಉಸ್ತುವಾರಿ ವಹಿಸಿಕೊಂಡ ಜಿಲ್ಲೆಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ ಪರಿಸ್ಥಿತಿ ಅವಲೋಕಿಸಿ ವರದಿ ನೀಡಲಾಗುತ್ತಿದೆ. ತಾನೂ ಎರಡು ದಿನಗಳ ಕಾಲ ಉತ್ತರ ಕನ್ನಡ ಸೇರಿದಂತೆ ಆರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪರಿಸ್ಥಿತಿ ಪರಿಶೀಲಿಸಿದ್ದೇನೆ. ಸೋಮವಾರ ನಡೆಯುವ ಸಂಪುಟ ಸಭೆಯಲ್ಲಿ ವರದಿ ಸಲ್ಲಿಸುತ್ತೇನೆ. ತುರ್ತು ಕ್ರಮ ಅಗತ್ಯವಿರುವ ಕಡೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸವದಿ ತಿಳಿಸಿದರು
ವಿರೋಧಿಗಳ ಕಾಲೆಳೆದ ಸವದಿ
ಅಥಣಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇತ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಜಿಗಿದಂವ, ಕಾಂಗ್ರೆಸ್ ಪಕ್ಷದಲ್ಲಿ ಈತನ ಡಿಮ್ಯಾಂಡ್ ಕಡಿಮೆ ಆಯಿತು. ಇನ್ನು ಕೇವಲ ಎರಡೇ ವರ್ಷ,ಈತನ ರಾಜಕೀಯ ಆಟ ಮುಗಿತು ಅಂತಾ ಟೀಕೆ ಮಾಡಿದ್ದ ಅದೆಷ್ಟೋ ರಾಜಕೀಯ ಬದ್ದ ವೈರಿಗಳಿಗೆ ಬಿರುಸಾಗೆ ಟಾಂಗ್ ಕೊಟ್ಟಿದ್ದಾರೆ.
ಸಮಗ್ರ ಅಭಿವೃದ್ಧಿ ಹಾಗೂ ಖಾತೆ ಹಂಚಿಕೆ ವಿಚಾರ ಹಂಚಿಕೊಂಡು, ನನ್ನ ಟೀಕೆ ಟಿಪ್ಪಣಿ ಮಾಡಿದವರಿಗೆ ದೇವರು ಇನ್ನಷ್ಟು ಶಕ್ತಿ ನೀಡದಲ್ಲಿ ಎಂದು ಟಾಂಗ್ ನೀಡಿದ್ದಾರೆ.




