ರಾಹುಲ್ ರಿಂದ ಮಹಾತ್ಮಾ ಗಾಂಧಿ ಆತ್ಮಕ್ಕೆ ಶಾಂತಿ! -ಪ್ರಭಾಕರ ಕೋರೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯಿಂದಾಗಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಆತ್ಮಕ್ಕೆ ಶಾಂತಿ ಸಿಗುವಂತಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ವ್ಯಂಗ್ಯವಾಡಿದ್ದಾರೆ.

ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಮೊಟ್ಟ ಮೊದಲು ಪ್ರಗತಿವಾಹಿನಿಗೆ ಪ್ರತಿಕ್ರಿಯೆ ನೀಡಿದ ಅವರು, ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ವಿಸರ್ಜಿಸಬೇಕೆನ್ನುವುದು ಗಾಂಧೀಜಿಯವರ ಅಭಿಪ್ರಾಯವಾಗಿತ್ತು. ಆದರೆ ಗಾಂಧೀಜಿ ಆಶಯವನ್ನು ಯಾರೂ ಈಡೇರಿಸಿರಲಿಲ್ಲ. ಸೋನಿಯಾ ಗಾಂಧಿಯಿಂದನೂ ಸಾಧ್ಯವಾಗಿರಲಿಲ್ಲ. ಈಗ ರಾಹುಲ್ ಗಾಂಧಿ ಕಾಂಗ್ರೆಸ್ ನ್ನು ಸಂಪೂರ್ಣ ಮುಗಿಸುವ ಮೂಲಕ ಅದನ್ನು ಈಡೇರಿಸುತ್ತಿದ್ದಾರೆ ಎಂದು ಕೋರೆ ಹೇಳಿದರು.
ಇಡೀ ದೇಶದ ಜನ ನರೇಂದ್ರ ಮೋದಿಯವರ 5 ವರ್ಷದ ಆಡಳಿತವನ್ನು ಮೆಚ್ಚಿದ್ದಾರೆ. ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ. ಮೋದಿ ವಿರುದ್ಧ ವಿರೋಧಿಗಳು ಏನೆಲ್ಲ ಮಾತನಾಡಿದರು. ಆದರೆ ಜನರು ಅವರಿಗೆಲ್ಲ ಸರಿಯಾದ ದಾರಿ ತೋರಿಸಿದ್ದಾರೆ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಈಗಲಾದರೂ ಮೈತ್ರಿ ಪಕ್ಷಗಳು ರಾಜಿನಾಮೆಕೊಟ್ಟು ಹೋಗಬೇಕು. ಜನ ಬೆಂಬಲಿಸಿರುವ ಬಿಜೆಪಿಗೆ ಆಡಳಿತ ನಡೆಸಲು ಅವಕಾಶ ಮಾಡಿಕೊಡಬೇಕು. ಕಾಂಗ್ರೆಸ್ ಅಧ್ಯಕ್ಷ ದಿನೇಶ ಗುಂಡೂರಾವ್ ರಾಜಿನಾಮೆ ನೀಡಬೇಕು ಎಂದು ಪ್ರಭಾಕರ ಕೋರೆ ಆಗ್ರಹಿಸಿದರು.




