Latest

ಕಡ್ಡಾಯವಾಗಿ ಮತ ಚಲಾಯಿಸಿ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:

ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಕರ್ತವ್ಯ ನಿರ್ವಹಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೊಡ್ಡ ಅಸ್ತ್ರವಾಗಿರುವ ಮತದಾನವು ಶ್ರೇಷ್ಠವಾದದ್ದು. ಚುನಾವಣಾ ಆಯೋಗವು ಸ್ವೀಪ್ ಸಮಿತಿ ರಚಿಸಿ ಮತದಾನದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಾಲೂಕಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಗೋಕಾಕ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದರು.
ಅವರು ಪಟ್ಟಣದಲ್ಲಿ ತಾಲೂಕಾ ಪಂಚಾಯತ, ಶಿಕ್ಷಣ ಇಲಾಖೆ, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ, ಮಧ್ಯಾಹ್ನ ಬಿಸಿಯೂಟ ಯೋಜನೆ, ಆರೋಗ್ಯ ಇಲಾಖೆ, ಪುರಸಭೆ ಕಾರ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಸರಾಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಸಹ ಭಾಗಿತ್ವ ಕುರಿತು ಮತಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಲೋಕಸಭೆ ಚುನಾವಣೆಯಲ್ಲಿ ಗೋಕಾಕ, ಮೂಡಲಗಿ ತಾಲೂಕಿನಲ್ಲಿ ನೂರಕ್ಕೆ ನೂರರಷ್ಟು ಮತದಾನವಾಗಲು ವಾಗ್ದಾನ ಅಭಿಯಾನ ಪ್ರಾರಂಭಿಸಿದೆ. ಆದ್ದರಿಂದ ನಿಮ್ಮದು ಕೇವಲ ಒಂದು ಮತವಲ್ಲ ಅದು ಪ್ರಜಾಪ್ರಭುತ್ವದ ಮೌಲ್ಯವಾಗಿರುತ್ತದೆ. 18 ವರ್ಷ ವಯಸ್ಸಿನ ಪ್ರತಿಯೊಬ್ಬರೂ ಮತದಾರರಾಗಬೇಕು. ಪ್ರತಿ ಮತದಾರನು ಮತ ಹಾಕುವ ಮೂಲಕ ಪ್ರಜಾಪ್ರಭುತ್ವದಲ್ಲಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಮತ ಜಾಗೃತಿ ಅಭಿಯಾನದಲ್ಲಿ ತಾಪಂ, ಶಿಕ್ಷಣ ಇಲಾಖೆಯ ಬಿಎಲ್‍ಒಗಳು, ಶಿಕ್ಷಕರು, ಸಿಡಿಪಿಒ ಕಛೇರಿಯ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು ಬಿಸಿಯೂಟದ ಸಿಬ್ಬಂದಿ, ಸ್ಥಳೀಯ ಸಂಸ್ಥೆಗಳಲ್ಲಿಯ ನೌಕರರು ಮತದಾರರಿಗೆ ಮತದ ಮೌಲ್ಯದ ಬಗ್ಗೆ ತಿಳಿ ಹೇಳಿ ಅತೀ ಹೆಚ್ಚು ಮತದಾನವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.
ಬಿ.ಇ.ಒ ಅಜೀತ ಮನ್ನಿಕೇರಿ, ಸಿಡಿಪಿಒ ವಾಯ್ ಎನ್ ಗುಜನಟ್ಟಿ ಮಾತನಾಡಿ, ಮತದಾನದ ಕುರಿತು ಜಾಗೃತಿ ಜಾಥಾ, ಮತದಾನದ ಮಹತ್ವ, ಭವ್ಯ ಭವಿಷ್ಯತ್ತಿನ ದೇಶ ನಿರ್ಮಾಣ ಕಾರ್ಯದಲ್ಲಿ ಮತ ಚಲಾವಣೆಯಿಂದಾಗುವ ಪ್ರಯೋಜನಗಳ ಕುರಿತು ವಿವರಿಸಿದರು.
ಮತದಾರರಿಗೆ ಜಾಗೃತಿ ಮೂಡಿಸಲು ಜಾಥಾ ಕಾರ್ಯಕ್ರಮವು ನಗರದ ಸರಕಾರಿ ಪ್ರಾಥಮಿಕ ಶಾಲೆಯಿಂದ ಹೋರಟು ಕಲ್ಮೇಶ್ವರ ಸರ್ಕಲ್, ಚೆನ್ನಮ್ಮ ಸರ್ಕಲ್ ಬಸವೇಶ್ವರ ಸರ್ಕಲ್, ಸಂಗಪ್ಪಜ್ಜ ಅಂಗಡಿ ಸರ್ಕಲ್ ಮಾರ್ಗವಾಗಿ ಚಲಿಸಿತು.

ಜಾಥಾ ಮತದಾನದ ಕುರಿತು ಘೋಷವಾಕ್ಯಗಳೊಂದಿಗೆ ನಡೆಯಿತು. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಎನ್ ಬಿ ಮೇಳ್ಳಗೇರಿ, ಹೇಮಾ ದೇಸೂರಕರ, ಸಕ್ಕು ಮರಾಠೆ ಇವರಿಗೆ ಬಹುಮಾನ ನೀಡಲಾಯಿತು.
ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಭಾರತಿ ಕೋಣಿ, ಪುರಸಭೆ ಮುಖ್ಯಾಧಿಕಾರಿ ಗೋವಿಂದ ಪೂಜೇರಿ, ಎಮ್.ಡಿ.ಎಮ್ ನಿರ್ದೇಶಕ ಎ.ಬಿ ಮಲಬನ್ನವರ, ಪಿಇಒ ಎಸ್.ಎ ನ್ಯಾಮಗೌಡರ, ಸಹಾಯಕ ನಿರ್ಧೇಶಕ ಎಚ್ ಎಸ್ ದೇಸಾಯಿ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಹಣಮಂತ ತಾಳಿಕೋಟಿ, ಹಣಮಂತ ಬಸಳಿಗುಂದಿ, ಎಸ್.ಎಸ್ ರೊಡ್ಡನವರ, ಗಂಗಾಧರ ಮಲಹಾರಿ, ಹಿರಿಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ, ಸಮುದಾಯ ಸಂಘಟಕ ಬಿ.ಎಸ್ ಪಾಟೀಲ, ಬಿ.ಆರ್.ಪಿ ಕೆ.ಎಲ್ ಮೀಶಿ, ಶಿಕ್ಷಕ ಸಂಘಟನೆಯ ಎಲ್.ಎಮ್ ಬಡಕಲ್, ಎಡ್ವಿನ್ ಪರಸನ್ನವರ, ಆರ್.ಎಮ್ ಮಹಾಲಿಂಗಪೂರ, ಸುರೇಶ ಕೋಪರ್ಡೆ ಹಾಗೂ ಮೇಲ್ವಿಚಾರಕರು, ಬಿ.ಎಲ್.ಒಗಳು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button