Latest

ಮಣ್ಣು ಆರೋಗ್ಯ ನಿರ್ವಹಣೆ, ಗೊಣ್ಣೆಹುಳು ಬಾಧೆ ನಿಯಂತ್ರಣ ಅರಿವು ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಕೃಷಿ ಇಲಾಖೆ ಚಿಕ್ಕೋಡಿ ಹಾಗೂ ಮಣ್ಣು ಆರೋಗ್ಯ ಕೇಂದ್ರ, ಗೋಕಾಕ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಜಾಗನೂರ ಹಾಗೂ ಕೆರೂರ ಗ್ರಾಮಗಳಲ್ಲಿ ಮಣ್ಣು ಆರೋಗ್ಯ ನಿರ್ವಹಣೆ ಹಾಗೂ ಗೊಣ್ಣೆಹುಳು ಬಾಧೆ ನಿಯಂತ್ರಣ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.

ಮಣ್ಣಿನ ಕೊಚ್ಚುವಿಕೆ, ಸವಕಳಿ, ಅತಿಯಾದ ರಾಸಾಯನಿಕ ಬಳಕೆ, ಪ್ಲಾಸ್ಟಿಕ್ ಸೇರ್ಪಡೆಯಿಂದಾಗಿ ಮಣ್ಣು ಪ್ರದೂಷಣೆಗೊಳ್ಳುತ್ತಿದ್ದು ಎಚ್ಚರಿಕೆ ವಹಿಸುವ ಅವಶ್ಯಕತೆ ಕುರಿತು ಮಣ್ಣು ವಿಶ್ಲೇಷಕ ನಿತಿನ್ ಕಂದಪ್ಪಗೋಳ ಮಾಹಿತಿ ನೀಡಿದರು. ಪ್ರಯೋಗಾಲಯದಲ್ಲಿ ಮಣ್ಣು ವಿಶ್ಲೇಷಣೆ ಮಾಡಿ ರೈತರಿಗೆ ಒದಗಿಸುತ್ತಿರುವ ಸೌಲಭ್ಯ ಕುರಿತು ಶಿವಶಂಕರ ಪಾಟೀಲ ಮತ್ತು ಮುದ್ರಿತ ಮಣ್ಣು ಆರೋಗ್ಯ ಚೀಟಿ ಬಳಕೆ ಕುರಿತು ನಾಗರಾಜ ಗೋಸಬಾಳ ವಿವರಿಸಿದರು.

Home add -Advt

ಕಬ್ಬು, ಗೋವಿಜೋಳ, ಜೋಳ ಹಾಗೂ ಇನ್ನಿತರ ಬೆಳೆಗಳನ್ನು ಬಾಧಿಸುತ್ತಿರುವ ಗೊಣ್ಣೆಹುಳು ನಿರ್ವಹಿಸಲು ಈಗ ಸಕಾಲವಾಗಿದ್ದು, ಸಾಮೂಹಿಕವಾಗಿ ಕೈಗೊಳ್ಳಬೇಕಿರುವ ಕ್ರಮಗಳಾದ ಆಳವಾದ ಮಾಗಿ ಉಳುಮೆ, ಬದು ಸ್ವಚ್ಛವಾಗಿಡುವುದು, ಗಿಡಮರಗಳ ಟೊಂಗೆ ಸವರುವುದು, ದೀಪದಬಲೆ ಅಳವಡಿಕೆ, ಬೆಳೆ ಬದಲಾವಣೆ ಹಾಗೂ ಮೆಟರೈಜಿಯಂ ಬಳಕೆ ಕುರಿತು ಕೃಷಿ ಅಧಿಕಾರಿ ರಮೇಶ ಚಡಚಾಳ ಹಾಗೂ ವಂದನಾ ಗಂಡ್ರೋಳ್ಳಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಾಗನೂರ ಪಂಚಾಯಿತಿ ಅಧ್ಯಕ್ಷೆ ಸುಧಾರಾಣಿ ರಾಮಚಂದ್ರ ಮರಾಠೆ ಮಾತನಾಡಿ ಇಲಾಖೆ ಕಾರ್ಯಕ್ರಮ ಹಾಗೂ ಸೌಲಭ್ಯಗಳ ಸದುಪಯೋಗ ಪಡೆಯುವಂತೆ ತಿಳಿಸಿದರು. ಸಹಾಯಕ ಕೃಷಿ ಅಧಿಕಾರಿ ಲಂಕೆಪ್ಪನವರ ಹಾಗೂ ಬಸವರಾಜ ಶಾನವಾಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅನುಪಮಾ ಮಹಾಜನ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿದರು. ಮಾರುತಿ ವಂದಿಸಿದರು.

Related Articles

Back to top button