Latest

ಸತ್ಯ ಹಾಗೂ ವಿಶ್ವಾಸಾರ್ಹ ತೀರ್ಪು ಹೊರಡಿಸುವುದು ನ್ಯಾಯಾಲಯಗಳ ಧ್ಯೇಯವಾಗಬೇಕು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಇಂದು ಕಕ್ಷಿದಾರರಿಗೆ ತ್ವರಿತ ಗತಿಯಲ್ಲಿ ನ್ಯಾಯ ಒದಗಿಸುವ ಅಗತ್ಯತೆ ಇದೆ ಎಂದು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾದ ರವಿ ಮಳಿಮಠ ಅವರು ಹೇಳಿದರು.
ಜಿಲ್ಲಾ ನ್ಯಾಯಾಧೀಕರಣ ಮಂಡಳಿ, ಲೋಕೋಪಯೋಗಿ ಇಲಾಖೆ ಮತ್ತು ಬಾರ್ ಅಸೋಸಿಯೇಷನ್ ಸಹಯೋಗದಲ್ಲಿ ನಗರದ ಕೆಎಲ್‌ಇ ಜೀರಗೆ ಸಭಾಂಗಣದಲ್ಲಿ ಶನಿವಾರ (ಮಾ.೯) ಏರ್ಪಡಿಸಿದ್ದ ಕೋರ್ಟ್ ಕ್ಯಾಂಟೀನ್ ಕಟ್ಟಡ, ಲಾ ಚೇಂಬರ‍್ಸ್ ಕಟ್ಟಡ ಹಾಗೂ ನ್ಯಾಯಾಲಯ ಕಟ್ಟಡದ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರ ಕೋರ್ಟ್ ಕಟ್ಟಡದ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಸಾರ್ವಜನಿಕರಿಗೆ ಉತ್ತಮ ಸೌಕರ್ಯ ಒದಗಲಿ ಎಂಬುವುದು ಸರಕಾರದ ಆಶಯವಾಗಿದೆ. ಸತ್ಯ ಹಾಗೂ ವಿಶ್ವಾಸಾರ್ಹ ತೀರ್ಪು ಹೊರಡಿಸುವುದು ನ್ಯಾಯಾಲಯಗಳ ಧ್ಯೇಯವಾಗಬೇಕು ಎಂದರು.


ಸಂಸದ ಸುರೇಶ ಅಂಗಡಿ ಮಾತನಾಡಿ, ಎಲ್ಲ ಕ್ಷೇತ್ರದಲ್ಲಿಯೂ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತಿದೆ. ನ್ಯಾಯದಲ್ಲಿಯೂ ಕೂಡಾ ಇತ್ತಿಚಿಗೆ ತಂತ್ರಜ್ಞಾನವನ್ನು ಬಳಸಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುತ್ತದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಬೇಕಿದೆ. ಶಿಸ್ತು ಮತ್ತು ಸಮಯದ ಪಾಲನೆ ಮಾಡುವುದು ವಕೀಲ ವೃತ್ತಿಯಲ್ಲಿ ಮುಖ್ಯವಾಗಿದೆ  ಎಂದು ಹೇಳಿದರು.
ಶಾಸಕ ಅನಿಲ ಬೆನಕೆ ಹಾಗೂ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎ.ಎಸ್.ಪಾಚಾಪುರೆ ಮಾತನಾಡಿದರು. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಆರ್.ಜೆ. ಸತೀಶ ಸಿಂಗ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷರಾದ ಕೆ.ಬಿ.ನಾಯ್ಕ, ಬಾರ್ ಕೌನ್ಸಿಲ್‌ನ ಸದಸ್ಯರಾದ ಎ.ಎ.ಮಗದುಮ್, ವಿನಯ ಮಂಗಲೆಕರ, ಕಲ್ಮೇಶ ಟಿ.ಕೆ ಅವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button