ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ನಗರದ ಎಪಿಎಂಸಿ ಪ್ರದೇಶದ ಮಾರ್ಕಂಡೇಯ ನಗರದ ಮಲ್ಲಿಕಾರ್ಜುನ ಗುರುಸಿದ್ದಪ್ಪ ಸತ್ತಿಗೇರಿ ಅವರ ಮನೆಯ ಮುಂದೆ ನಿರ್ಮಿಸಲಾಗಿರುವ ಸ್ವಯಂಭೂ ಶ್ರೀ ವರಸಿದ್ಧಿ ವಿನಾಯಕ ಮಂದಿರದ ಉದ್ಘಾಟನಾ ಸಮಾರಂಭವು ಫೆ.೧೦ ರಂದು ನಡೆಯಲಿದೆ.
ಮಹಾಪೌರ ಬಸಪ್ಪ ಚಿಕ್ಕಲದಿನ್ನಿ ಮಂದಿರ ಉದ್ಘಾಟಿಸಲಿದ್ದು, ನಗರಸೇವಕ ಮೋಹನ ಬೆಳಗುಂದಕರ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಸುರೇಶ ಅಂಗಡಿ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಲಕ್ಷ್ಮಿ ಹೆಬ್ಬಾಳಕರ, ಎಂಎಲ್ಸಿ ಮಹಾಂತೇಶ ಕವಟಗಿಮಠ, ಶಂಕರಗೌಡ ಪಾಟೀಲ, ಸಿಪಿಐ ಜೆ.ಎಂ. ಕಾಲಿಮಿರ್ಚಿ ಭಾಗವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ನಂತರ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಈಗಾಗಲೇ ಫೆ.೭ ರಂದು ಮಂದಿರದ ಕಲಶ ಪೂಜೆ ನಡೆದಿದ್ದು, ೮ ರಂದು ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಜಿ ಹಾಗೂ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿಗಳಿಂದ ಸ್ವಯಂಭೂ ಗಣೇಶನಿಗೆ ಪೂಜೆ ನೆರವೇರಿಸಲಾಗಿದೆ.
ಮಂದಿರ ನಿರ್ಮಾಣದ ಹಿನ್ನೆಲೆ : ಗಣೇಶನ ಭಕ್ತರಾದ ಮಲ್ಲಿಕಾರ್ಜುನ ಗುರುಸಿದ್ದಪ್ಪ ಸತ್ತಿಗೇರಿ ಇವರಿಗೆ ೧೦-೧೨ ವರ್ಷಗಳ ಹಿಂದೆ ಮಹಾರಾಷ್ಟ್ರದ ಕುಡಾಳ ಅರಣ್ಯದಲ್ಲಿ ಸ್ವಯಂಭೂ ಗಣೇಶನ ಮೂರ್ತಿ ಸಿಕ್ಕಿತ್ತು. ಆಗಿನಿಂದಲೂ ಅವರು ಮೂರ್ತಿಯನ್ನು ತಮ್ಮ ಮನೆಯಲ್ಲಿ ಪೂಜೆ ಮಾಡುತ್ತಿದ್ದರು. ಈಗ ಎಲ್ಲರಿಗೂ ಗಣೇಶನ ದರ್ಶನಾಶೀರ್ವಾದ ಲಭ್ಯವಾಗಲೆಂದು ತಮ್ಮ ಮನೆಯ ಮುಂದೆ ಮಂದಿರ ಕಟ್ಟಿಸಿ ಸ್ವಯಂಭೂ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.