Latest

ಮಾರ್ಚ್ ಅಂತ್ಯದೊಳಗೆ ಗೋಕಾಕ ಜಿಲ್ಲೆ ಮಾಡಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ:

ಅತಿ ಹೆಚ್ಚು ತಾಲೂಕುಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆ ವಿಭಜಿಸಿ ಮಾರ್ಚ ಮಾಸಾಂತ್ಯದೊಳಗೆ ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕೆಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸಿಂಪಿ ಆಗ್ರಹಿಸಿದರು.
ಅವರು, ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ನ್ಯಾಯವಾದಿಗಳ ಸಂಘದಿಂದ ಕರೆದ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿ ಕಳೆದ 20 ವರ್ಷಗಳಿಂದ ನ್ಯಾಯವಾದಿಗಳ ಸಂಘ ಗೋಕಾಕ ಜಿಲ್ಲಾ ಕೇಂದ್ರವನ್ನಾಗಿಸುವಂತೆ ಅನೇಕ ಹೋರಾಟಗಳನ್ನು ಮಾಡುತ್ತ ಬಂದಿದೆ. ಆದರೆ ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಎಚ್ ಪಟೇಲರನ್ನು ಬಿಟ್ಟರೆ ಈ ವರೆಗೆ ರಾಜ್ಯವನ್ನಾಳಿದ ಯಾವುದೇ ಸರಕಾರ ಬೆಳಗಾವಿ ವಿಭಜಿಸಿ ಗೋಕಾಕಕನ್ನು ಜಿಲ್ಲೆಯನ್ನಾಗಿ ಮಾಡಲು ಹಿಂದೇಟು ಹಾಕುತ್ತಿವೆ ಎಂದು ದೂರಿದರು.
ಗೋಕಾಕ ಜಿಲ್ಲಾ ಹೋರಾಟವನ್ನು ಜೀವಂತವಾಗಿರಿಸಿಕೊಂಡು ಬಂದಿರುವ ನ್ಯಾಯವಾದಿಗಳ ಸಂಘವು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಈ ವರೆಗೆ ಗೋಕಾಕ ಜಿಲ್ಲೆಯನ್ನಾಗಿ ಘೋಷಿಸುತ್ತಿಲ್ಲ . ಹೀಗಾಗಿ ಮಾರ್ಚ ತಿಂಗಳ ಅಂತ್ಯದೊಳಗೆ ವಿಶೇಷ ಸಂಪುಟ ಸಭೆ ಕರೆದು ಗೋಕಾಕಕನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ನ್ಯಾಯವಾದಿಗಳ ಸಂಘ ಹಾಗೂ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉಗ್ರರೂಪದ ಪ್ರತಿಭಟನೆಗೆ ಅನಿಯಾಗುವುದಾಗಿ ತಿಳಿಸಿದರು.
ನ್ಯಾಯವಾದಿ ಜಿ ಆರ್ ಪೂಜೇರ ಮಾತನಾಡಿ, ಗೋಕಾಕ ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಭೌಗೋಳಿಕವಾಗಿ ಅತ್ಯಂತ ಪ್ರಗತಿಯ ಸ್ಥಾನದಲ್ಲಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಶ್ರೀಮಂತ ತಾಲೂಕು ಕೇಂದ್ರವಾಗಿದೆ. ಈಗಾಗಲೇ ಅನೇಕ ಆಯೋಗಗಳು ಜಿಲ್ಲಾ ಕೇಂದ್ರಕ್ಕೆ ಗೋಕಾಕ ಅರ್ಹತೆಯನ್ನು ಹೊಂದಿರುವುದಾಗಿ ವರದಿ ನೀಡಿವೆ. ಗೋಕಾಕನ್ನು ಜಿಲ್ಲೆಯನ್ನಾಗಿಸಲು ಸರಕಾರಕ್ಕೆ ನಮ್ಮ ಕೂಗು ಮುಟ್ಟಿಸುವಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಪ್ರಯತ್ನಿಸಬೇಕೆಂದರು.
ಮೂಡಲಗಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ ಎಲ್ ಹುಣಶ್ಯಾಳ ಮಾತನಾಡಿ ಸುಮಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಗೋಕಾಕ ಜಿಲ್ಲಾ ಕೇಂದ್ರಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಇದ್ದು, ಜನಪ್ರತಿನಿಧಿಗಳು ಪಕ್ಷಾತೀತವಾಗಿ ಹೋರಾಟಕ್ಕೆ ಮುಂದೆ ಬರಬೇಕೆಂದರು.
ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಸ್ ಎಸ್ ಪಾಟೀಲ, ಮಾಜಿ ಕಾರ್ಯದರ್ಶಿ ಸಿ ಬಿ ಗಿಡ್ಡನ್ನವರ ಇದ್ದರು.

Home add -Advt

Related Articles

Back to top button