ಮೀಸಲಾತಿ ಘೋಷಣೆ; ಸಿಎಂ ಬೊಮ್ಮಾಯಿ ಪ್ರಸ್ತಾವನೆ ಕಸದ ಬುಟ್ಟಿಗೆ ಹಾಕಿದ ಮೋದಿ ಸರ್ಕಾರ; ಕಿಡಿಕಾರಿದ ಸುರ್ಜೇವಾಲ

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಕಲ್ಯಾಣ ಕರ್ನಾಟಕದ ಜನರ ಮೇಲೆ ಬೊಮ್ಮಾಯಿ ಅವರ ಸರ್ಕಾರ ದ್ವೇಷ ಸಾಧಿಸುತ್ತಿದೆ. ದ್ವೇಷ, ಬೇಧ ಭಾವದ ಮೂಲಕ, ಈ ಭಾಗದ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ಈ ಮಹತ್ವದ ಪ್ರದೇಶಕ್ಕೆ ಸಂವಿಧಾನಬದ್ಧವಾಗಿ ವಿಶೇಷ ಸ್ಥಾನಮಾನ ನೀಡಲು ಸಂಸತ್ತಿನಲ್ಲಿ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ತಿಳಿಸಿದ್ದಾರೆ.
ಕಲಬುರ್ಗಿಯಲ್ಲಿ ಜಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವುದರ ವಿರುದ್ಧ ನಿಂತಿತ್ತು. ಬಿಜೆಪಿಯ ಆಗಿನ ಅಧ್ಯಕ್ಷರು ಹಾಗೂ ಉಪಪ್ರಧಾನಿಯಾಗಿದ್ದ ಲಾಲ್ ಕೃಷ್ಣ ಅಡ್ವಾಣಿ ಅವರು ಕಲ್ಬುರ್ಗಿಯಿಂದ ವಿಜಯಪುರದವರೆಗೂ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷ ಈ ಭಾಗದ ಜನರಿಗೆ ವಿಶೇಷ ಸ್ಥಾನಮಾನ ನೀಡಲು ಸಂಕಲ್ಪ ಮಾಡಿ, 2013 ರಲ್ಲಿ ಇದನ್ನು ಮಾಡಿ ತೋರಿಸಿತು. ನಾವು ದೇಶದ ಎಲ್ಲ ಪಕ್ಷಗಳನ್ನು ಒಗ್ಗೂಡಿಸಿ ಬಿಜೆಪಿ ಹೊರತು ಉಳಿದ ಎಲ್ಲಾ ಪಕ್ಷಗಳ ಒಪ್ಪಿಗೆ ಪಡೆದು 371ಜೆ ವಿಶೇಷ ಸ್ಥಾನಮಾನ ನೀಡುವಲ್ಲಿ ಯಶಸ್ವಿಯಾದೆವು ಎಂದರು.
ಈ ದೇಶದ ಎರಡು ಕಡೆ ಅತಿಹೆಚ್ಚು ಒಣ ಪ್ರದೇಶಗಳಿವೆ. ಒಂದು ರಾಜಸ್ಥಾನ ಮತ್ತೊಂದು ಕಲ್ಯಾಣ ಕರ್ನಾಟಕ. ಇಲ್ಲಿನ ಜನರು ಶ್ರಮಜೀವಿಗಳು, ಧೈರ್ಯಶಾಲಿಗಳಾದರೂ ಪ್ರಾಕೃತಿಕ ಅನಾನುಕೂಲ ಹಾಗೂ ನೀರಿನ ಕೊರತೆ ಹೆಚ್ಚಾಗಿದೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಹಾಗೂ ದಿವಂಗತ ಧರಂಸಿಂಗ್ ಅವರು ಒಟ್ಟಾಗಿ ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ ಆರಂಭಿಸಿದರು. ಸ್ವಾತಂತ್ರ್ಯ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗದ ದೊಡ್ಡ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಈ ಭಾಗದಲ್ಲಿ ತುಂಗಭದ್ರಾ ಆಣೆಕಟ್ಟು, ರಾಯಚೂರಿನಲ್ಲಿ ರಾಜೀವ್ ಗಾಂಧಿ ಥರ್ಮಲ್ ಕೇಂದ್ರ, ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆ, ಇಎಸ್ಐ ಆಸ್ಪತ್ರೆ ನಿರ್ಮಾಣ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ, ವಿಶೇಷ ಸ್ಥಾನಮಾನ ನೀಡುವುದರವರೆಗೂ ಎಲ್ಲವನ್ನೂ ಕಾಂಗ್ರೆಸ್ ಪಕ್ಷ ಮಾಡಿದೆ.
ಈ ವಿಶೇಷ ಸ್ಥಾನಮಾನದ ಪರಿಣಾಮ ಈ ಭಾಗದ ಸುಮಾರು 40 ಸಾವಿರ ಮಕ್ಕಳಿಗೆ ವೈದ್ಯಕೀಯ ಸೀಟು ಲಭಿಸಿದೆ. ಕಾಂಗ್ರೆಸ್ ಸರ್ಕಾರದ 5 ವರ್ಷಗಳ ಅವಧಿಯಲ್ಲಿ 30 ಸಾವಿರ ಯುವಕರಿಗೆ ಸರ್ಕಾರಿ ನೌಕರಿ ನೀಡಲಾಗಿದೆ. ಈಗ ಈ ಎಲ್ಲಾ ಕಾರ್ಯಗಳನ್ನು ಪ್ರಶ್ನೆ ಮಾಡಲಾಗುತ್ತಿದೆ. ಈಗ ಈ ಭಾಗದ ಅಭಿವೃದ್ಧಿಗೆ ಹೊಸ ಯಜ್ಞ ಆರಂಭವಾಗಬೇಕಿದೆ. ಇದರಿಂದ ಈ ಭಾಗದ ಜನರಿಗೆ ಉದ್ಯೋಗ, ಶಿಕ್ಷಣ ಸಿಗುವಂತೆ ಆಗಬೇಕು. ಈಗ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಸಿದ್ದರಾಮಯ್ಯ, ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ ಹಾಗೂ ಎಲ್ಲಾ ನಾಯಕರ ನೇತೃತ್ವದಲ್ಲಿ ಡಿ.10 ರಂದು ಹೊಸ ಸಂಕಲ್ಪದಿಂದ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಯಜ್ಞ ಆರಂಭಿಸಬೇಕಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರಿದ 40 ಸಾವಿರ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಆರೋಗ್ಯ, ಶಿಕ್ಷಣ, ಉದ್ಯೋಗ, ವಿದ್ಯುತ್, ನೀರಿನ ವಿಚಾರವಾಗಿ ಹಲವು ಭಾಗಗಳಲ್ಲಿ ಸಮಸ್ಯೆ ಇವೆ.
ಈ ಭಾಗದಲ್ಲಿ ಬಡವರು, ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಒಂದನೇ ತರಗತಿಯಿಂದ 8 ನೇ ತರಗತಿವರೆಗಿನ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ದಶಕಗಳಿಂದ ಕಾಂಗ್ರೆಸ್ ಸರ್ಕಾರ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ಮೋದಿ ಸರ್ಕಾರ ನಿಲ್ಲಿಸಿದೆ. ಆಮೂಲಕ ಬಡವರಿಂದ ಶಿಕ್ಷಣದ ಹಕ್ಕು ಕಸಿಯಲಾಗಿದೆ.
ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಬಿಜೆಪಿ ಸರ್ಕಾರ ನಿರ್ಲಕ್ಷ ವಹಿಸಿದೆ. ಕಾಗದದ ಮೇಲೆ ಮೀಸಲಾತಿ ಹೆಚ್ಚಳ ಮಾಡಿದರೆ ಸಾಲದು. ಅದನ್ನು ಸಂವಿಧಾನದಲ್ಲಿ ಸೇರಿಸಬೇಕು. ಈ ಭಾಗದ ರಕ್ಷಣೆಗಾಗಿ ನಾವು ಸಂವಿಧಾನದಲ್ಲಿ ಬದಲಾವಣೆ ತಂದಿದ್ದೇವೆ. ನಾವು ಕೂಡ ವಿಶೇಷ ಸ್ಥಾನಮಾನ ಅಸಾಧ್ಯ ಎಂದು ಭಾವಿಸಿದ್ದರೆ ಇದು ಸಾಧ್ಯವಾಗುತ್ತಿತ್ತೆ?
ಈಗ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಬೊಮ್ಮಾಯಿ ಅವರ ಸರ್ಕಾರ ಕೇವಲ ಆಸೆ ತೋರಿಸುತ್ತಿದೆ. ಈ ವಿಚಾರವಾಗಿ ಬೊಮ್ಮಾಯಿ ಅವರ ಸರ್ಕಾರದ ಪ್ರಸ್ತಾವನೆಯನ್ನು ಮೋದಿ ಸರ್ಕಾರ ಕಸದ ಬುಟ್ಟಿಗೆ ಎಸೆದಿದೆ. ಹೀಗಾಗಿ ಪರಿಶಿಷ್ಟರ ಮೀಸಲಾತಿ ಹೆಚ್ಚಳ ಬಿಜೆಪಿಯಿಂದ ಅಸಾಧ್ಯ. ಇದು ಕೇವಲ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ನಾವು ಅದನ್ನು ಮಾಡಲು ಕಟಿಬದ್ಧರಾಗಿದ್ದೇವೆ ಎಂದು ಹೆಳಿದರು.
ಬಡವರು, ರೈತರು, ಯುವಕರು, ಮಹಿಳೆಯರ ಮೇಲೆ ಆಗುತ್ತಿರುವ ಪ್ರಹಾರದ ವಿರುದ್ಧ ನಾವು ಜನಾಂದೋಲನ ರೂಪಿಸುತ್ತಿದ್ದು, ಮುಂದಿನ 10 ರಂದು ಸಮಾವೇಶ ಮಾಡಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಈ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಅಧ್ಯಕ್ಷರು ಸೂಚನೆ ನೀಡಲಿದ್ದಾರೆ.
ಜನರ ಬದುಕಿನ ಜತೆ ಚೆಲ್ಲಾಟ ಆಡುವುದು ಬಿಜೆಪಿ ಕೆಲಸ. ಆದರೆ ಕಾಂಗ್ರೆಸ್ ದು ಜನರ ಬದುಕು ಕಟ್ಟುವ ಕೆಲಸವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಜನರ ಜತೆ ಬಿಜೆಪಿ ಸರ್ಕಾರ ಆಡುತ್ತಿರುವ ಆಟವನ್ನು ನಿಲ್ಲಿಸಬೇಕಿದೆ. ಬಿಜೆಪಿ ಸಮಾಜ ಒಡೆದರೆ, ನಾವು ಸಮಾಜ ಒಂದುಗೂಡಿಸುತ್ತೇವೆ ಎಂದರು.
ಈ ವೇಳೆ ಮಾತನಾಡಿದ ಡಿಕೆ.ಶಿವಕುಮಾರ್, ಕಲ್ಯಾಣ ಕರ್ನಾಟಕದ ಭಾಗದ ಕಲ್ಯಾಣಕ್ಕೆ ಶಕ್ತಿ ತಂದ 371 ಜೆ ವಿಶೇಷ ಸ್ಥಾನಮಾನಕ್ಕೆ 10 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಡಿ.10 ರಂದು ದೊಡ್ಡ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಇಂದು ನಮ್ಮ ಎಲ್ಲಾ ನಾಯಕರ ಜತೆ ಚರ್ಚೆ ಮಾಡಲಾಗಿದೆ. ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಈ ವಿಶೇಷ ಸ್ಥಾನಮಾನ ನೀಡಲಾಗಿದ್ದು, ಅವರು ತಮ್ಮ ರಾಜಕೀಯ ಜೀವನದಲ್ಲಿ ಅತಿ ದೊಡ್ಡ ಸಾಕ್ಷಿ ಗುಡ್ಡೆ ಹಾಕಿದ್ದಾರೆ. ಆ ಮೂಲಕ ಈ ಭಾಗದ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ತಮ್ಮ ಜನ್ಮ ಭೂಮಿಗೆ ಆಗಮಿಸುತ್ತಿದ್ದಾರೆ. ಖರ್ಗೆ ಅವರು ಸಂವಿಧಾನ ತಿದ್ದುಪಡಿ ಮೂಲಕ ಈ ಭಾಗದ ಜನರ ಬದುಕಿನಲ್ಲಿ ಬದಲಾವಣೆ ತಂದರು. ಹೀಗಾಗಿ ನಾವು ಅವರಿಗೆ ಅಭಿನದನೆ ಸಲ್ಲಿಸಬೇಕು. ಇಂತಹ ಹಲವು ಹೋರಾಟಗಳ ಮೂಲಕ ಇಂದು ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಮ್ಮ ನಾಯಕರಿಗೆ ಕೆಲವು ಮಾರ್ಗದರ್ಶನ ನೀಡಲು ಇಲ್ಲಿಗೆ ಬಂದಿದ್ದೇವೆ. ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮೈತ್ರಿ ಸರ್ಕಾರದ ರೀತಿ ಕೆಲಸ ಮಾಡುತ್ತಿದೆ. ಈ ಭಾಗದಿಂದ ಹೆಚ್ಚಿನ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಲಿಲ್ಲ ಎಂಬ ಒಂದೇ ಕಾರಣಕ್ಕೆ ಈ ಭಾಗದ ಜನರ ಮೇಲೆ ದ್ವೇಷದ ಮನೋಭಾವ ತೋರುತ್ತಿದೆ. ಹೀಗಾಗಿ ಈ ಭಾಗದ ಅಭಿವೃದ್ಧಿಗೆ ಬೇಕಾದ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಈ ಬಗ್ಗೆ ನಮ್ಮ ನಾಯಕರು ಸಾಕಷ್ಟು ಬಾರಿ ಧ್ವನಿ ಎತ್ತಿದ್ದಾರೆ.
ಸರ್ಕಾರದ ತಪ್ಪುಗಳನ್ನು ನಾವು ತೋರಿಸಿ, ಅವರು ಎಲ್ಲಿ ತಿದ್ದಿಕೊಳ್ಳಬೇಕು ಎಂದು ತೋರಿಸಬೇಕಾದ ಅಗತ್ಯವಿದೆ. ನಮ್ಮ ಪಕ್ಷದ ಉದ್ದೇಶ ಜನರ ಬದುಕು ಸುಧಾರಣೆ ಕಾಣುವುದು. ಬಿಜೆಪಿ ಅವರ ಉದ್ದೇಶ ಭಾವನೆಗಳ ಮೇಲೆ ರಾಜಕೀಯ ಮಾಡುವುದು. ಭಾವನೆ ಹಾಗೂ ಬದುಕಿನ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ. ಬಿಜೆಪಿ ಭಾವನಾತ್ಮಕ ವಿಷಯಗಳಿಗೆ ಒತ್ತು ನೀಡಿದರೆ, ನಾವು ಜನರ ಬದುಕಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಈ ಹಿನ್ನೆಲೆಯಲ್ಲಿ ಜನ ಜಾಗೃತಿ ಮೂಡಿಸಲು ಈ ಬೃಹತ್ ಕಾರ್ಯಕ್ರಮವನ್ನು ನಮ್ಮ ಎಲ್ಲಾ ನಾಯಕರು ರೂಪಿಸಿದ್ದಾರೆ ಎಂದರು.
ಬೆಳಗಾವಿ ಗಡಿವಿವಾದ; ನಮ್ಮ ಊರು, ಹಳ್ಳಿ ನಮ್ಮದು; ಬಿಜೆಪಿ ರಾಜಕೀಯ ಬಿಟ್ಟು ಯೋಚಿಸಲಿ ಎಂದ ಡಿ.ಕೆ.ಶಿವಕುಮಾರ್
https://pragati.taskdun.com/d-k-shivakumarreactionbelagavi-border-issue/




