Kannada NewsLatest

*ಚಾಯ್ ಪೇ ಚರ್ಚಾ ಮೂಲಕ ಚುನಾವಣಾ ಪ್ರಚಾರ ನಡೆಸಿದ BJP ಅಭ್ಯರ್ಥಿ ರವಿ ಪಾಟೀಲ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರ ಭಾರತೀಯ ಜನತಾ ಪಾರ್ಟಿ ಅಧಿಕೃತ ಅಭ್ಯರ್ಥಿ ಡಾಕ್ಟರ್ ರವಿ ಪಾಟೀಲ್ ಬೆಳಗಾವಿ ನಗರದ ರಾಮದೇವ್ ಗಲ್ಲಿ ಕಾರ್ ಪಾರ್ಕಿಂಗ್ ನಲ್ಲಿ ಚಾಯ್ ಪೆ ಚರ್ಚಾ ಕಾರ್ಯಕ್ರಮದ ಮೂಲಕ ನಗರದ ಮುಖ್ಯ ಮಾರುಕಟ್ಟೆಯ ಪರಿಸರದಲ್ಲಿ ಪ್ರಚಾರ ಕಾರ್ಯ ಕೈಗೊಂಡರು.

ಈ ಸಂದರ್ಭದಲ್ಲಿ ಡಾ ರವಿ ಪಾಟೀಲ್ ನಗರದ ವರ್ತಕರೊಂದಿಗೆ ಸುದೀರ್ಘಕಾಲ ಸಂವಹನ ನಡೆಸಿ ಅವರ ಸಮಸ್ಯೆಗಳನ್ನು ಕುಲಂಕಷವಾಗಿ ಆಲಿಸಿದರು. ಮೂಲಭೂತ ಸೌಕರ್ಯಗಳ ಕೊರತೆಯಿಂದ ತಮಗಾಗಿರುವ ತೊಂದರೆಯನ್ನು ಜನರು ವಿವರಿಸಿದರು.

ನಗರದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸಲು ಅನುಕೂಲವಾಗುವಂತೆ ನಗರದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕು ಎಂದು ವರ್ತಕರು ಒತ್ತಾಯಿಸಿದರು. ವಾರ್ಡ್ ನಂಬರ್ ನಾಲ್ಕರ ಕಾರ್ಪೊರೇಟರ್ ಜಯತೀರ್ಥ ಸೌಂದತ್ತಿ, ಶಂಕರ ಪಾಟೀಲ್, ಶೈಲಿಶ್ ಕಾವೇಡಿಯ, ಮಹೇಂದ್ರ ಪೊರ್ವಾಲ್, ಸುಧೀರ್ ಪೊರ್ವಾಲ್, ವಿಜಯ್ ಭದ್ರಾ, ಬಾಹುಬಲಿ ದೊಡ್ಡಣ್ಣವರ್, ವಿಕ್ರಂ ಪುರೋಹಿತ್, ರಾಹುಲ್ ಫಾರ್ವಲ್, ರವಿ ಚೋಬಾರಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ್ ವರ್ತಕರ ಆಶೋತ್ತರಗಳಿಗೆ ಸ್ಪಂದಿಸಲು ತಾವು ಪ್ರತಿ ತಿಂಗಳು ಅವರೊಂದಿಗೆ ಸಂವಾದ ನಡೆಸಿ ಅದರಂತೆ ಕಾರ್ಯಪ್ರವೃತ್ತರಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.

ಬೆಳಗ್ಗೆ ವರ್ತಕ ಸಮುದಾಯವನ್ನು ಭೇಟಿಯಾದ ಬಳಿಕ ನಗರದ ಬಸವ ಕಾಲೋನಿಯ ಮುಖ್ಯ ರಸ್ತೆಯಲ್ಲಿ ಪ್ರಚಾರ ಮಾಡಿದ ರವಿ ಪಾಟೀಲ್, ಮನೆ ಮನೆಗೆ ತೆರಳಿ ಮೇ 10ರ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಬೇಕು ಎಂದು ವಿನಂತಿಸಿದರು. ಬೆಳಗಾವಿ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಮುಂದುವರಿಯಬೇಕಾದರೆ ತಮ್ಮನ್ನು ಬಹುಮತದಿಂದ ಆರಿಸಿ ತರಬೇಕೆಂದು ಕೋರಿದರು.

ನಂತರ ಧರ್ಮನಾಥ್ ಭವನದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಸಮಾವೇಶದಲ್ಲಿ ಪಾಲ್ಗೊಂಡರು. ಈ ಮಧ್ಯೆ ಡಾ. ರವಿ ಪಾಟೀಲ್ ಅವರ ಪತ್ನಿ ಸುನೀತಾ ಪಾಟೀಲ ನಗರದ ವೈಭವ ನಗರದ ವಿವಿಧ ಬಡಾವಣೆಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಂಡರು. ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಆರಿಸಿ ತರುವ ಮಹತ್ವವನ್ನು ಹೇಳಿದರು. ಬಸವ ಕಾಲೋನಿ ವೈಭವ ನಗರ ಹಾಗೂ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ವಿಶೇಷವಾಗಿ ಪ್ರಯಾಣಕ್ಕೆ ಬಸ್ ಸೌಕರ್ಯದ ಕೊರತೆಯಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

https://pragati.taskdun.com/d-k-shivakumarpressmeetpm-modiamith-shah/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button