
ಪ್ರಗತಿವಾಹಿನಿ ಸುದ್ದಿ: ಜಿಲ್ಲಾಡಳಿತದ ಎಚ್ಚರಿಕೆಯನ್ನು ನಿರ್ಲಕ್ಷ ಮಾಡಿ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿಯೊಂದು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಪಲ್ಟಿಯಾಗಿದ್ದು, ಇಬ್ಬರು ಮೀನುಗಾರರು ನೀರುಪಾಲಾಗಿರುವ ಘಟನೆ ನಡೆದಿದೆ.
ಮಂಗಳೂರಿನ ತೋಟಬೆಂಗ್ರೆ ಅಳಿವೆ ಬಾಗಿಲು ಬಳಿ ಈ ದುರಂತ ಸಂಭವಿಸಿದೆ. ಯಶವಂತ ಹಾಗೂ ಕಮಲಾಕ್ಷ ಸಮುದ್ರಪಾಲಾಗಿರುವ ಮೀನುಗಾರರು.
ಬಿರುಗಾಳಿ ಹೊಡೆತ, ಅಲೆಗಳ ರಭಸಕ್ಕೆ ಸಿಲುಕಿ ಮೀನುಗಾರರು ತೆರಳಿದ್ದ ನಾಡದೋಣಿ ಪಲ್ಟಿಯಾಗಿದೆ. ದೋಣಿಯಲ್ಲಿದ್ದ ಇಬ್ಬರು ಮೀನುಗಾರರು ನೀರಿನಲ್ಲಿ ಕೊಚ್ಚಿಹೋಗಿ ಕಣ್ಮರೆಯಾಗಿದ್ದಾರೆ. ದೋಣಿಯ ಅವಶೇಷಗಳು ಕಡಲ ತೀರಕ್ಕೆ ಬಂದು ಬಿದ್ದಿದೆ. ನಾಪತ್ತೆಯಾಗಿರುವ ಮೀನುಗಾರರಿಗಾಗಿ ಶೋಧ ಕಾರ್ಯ ನಡೆದಿದೆ.