*ಮತ್ತೆ ಭುಗಿಲೆದ್ದ ಹಿಂಸಾಚಾರ: ಇಂಟರ್ನೆಟ್ ಬಂದ್, ನಿಷೇಧಾಜ್ಞೆ ಜಾರಿ*

ಪ್ರಗತಿವಾಹಿನಿ ಸುದ್ದಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರದ ಆತಂಕ ಸೃಷ್ಟಿಯಾಗಿದೆ. ಮುಂಜಾಗರೂಕತಾ ಕ್ರಮವಾಗಿ ಐದು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಇಂಟರ್ನೆಟ್ ಸೇವೆಯನ್ನು ನಿರ್ಬಂಧಿಸಲಾಗಿದೆ.
ಶನಿವಾರ ಮೈತೇಯಿ ಪಂಗಡಕ್ಕೆ ಸೇರಿದ ಐವರು ಯುವಕರನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂಬ ಅನಧಿಕೃತ ಸುದ್ದಿಯೊಂದು ಹರಿದಾಡಿದ ಪರಿಣಾಮ ಹಿಂಸಾಚಾರದ ಆತಂಕ ಸೃಷ್ಟಿಯಾಗಿದೆ. ಮುಂದಿನ ಐದು ದಿನಗಳ ಕಾಲ ಇಂಟರ್ನೆಟ್ ಸೇವೆಯನ್ನು ನಿರ್ಬಂಧಿಸಿ, ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ.
ಆರಾಂಬಾಯ್ ತೆಂಗೋಳ್ ಸಂಘಟನೆಗೆ ಸೇರಿದ ಐವರು ಯುವಕರನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಸುದ್ದಿಯ ಬಗ್ಗೆ ಯಾವುದೇ ಖಚಿತ ಮಾಹಿತಿ ಇರಲಿಲ್ಲ.
ಆದರೆ ಸಮಾಜ ಘಾತುಕ ಶಕ್ತಿಗಳು ಈ ಪ್ರಕರಣವನ್ನು ದುರ್ಬಳಕೆ ಮಾಡಿಕೊಳ್ಳಲು ಘಟನೆಗೆ ಸಂಬಂಧ ಪಡೆದ ಭೀಕರ ವಿಡಿಯೋಗಳು ಹಾಗೂ ಸುಳ್ಳು ಮಾಹಿತಿಯನ್ನು ಹರಿಬಿಟ್ಟಿದ್ದಾರೆ.
ಯಾವುದೇ ಹಿಂಸಾಚಾರದಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಾಣಹಾನಿ, ಆಸ್ತಿನಷ್ಟ, ಆತಂಕದ ಪರಿಸ್ಥಿತಿ ನಿರ್ಮಾಣ ಉಂಟುಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಣಿಪುರ ಸರ್ಕಾರ ಎಚ್ಚರಿಸಿದೆ.



