*ಸಾಧನೆ ಯಾರ ಸ್ವತ್ತೂ ಅಲ್ಲ, ಸಾಧಿಸುವ ಛಲ ಬೇಕಷ್ಟೇ: ರವಿ ಕೊಟಾರಗಸ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾಧನೆ ಯಾರ ಸ್ವತ್ತೂ ಅಲ್ಲ. ಅದಕ್ಕೆ ಸಾಧಿಸುವ ಛಲ ಬೇಕಷ್ಟೇ. ಅನೇಕ ತೊಡಕು ಮತ್ತು ಸವಾಲುಗಳ ಮಧ್ಯೆಯೂ, ಶೈಕ್ಷಣಿಕವಾಗಿ ಸಾಧನೆ ಮೆರೆದ ಸರ್ಕಾರಿ ನೌಕರರ ಮಕ್ಕಳು ಹಾಗೂ ಈ ಭಾಗದ ಬಡ ವಿದ್ಯಾರ್ಥಿಗಳನ್ನು ಒಂದೇ ಸೂರಿನಡಿ ಗೌರವಿಸುತ್ತಿರುವ ಈ ಸಂಘದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಸರ್ಕಾರಿ ನೌಕರರ ಸಹಕಾರಿ ಗೃಹ ನಿರ್ಮಾಣ ಸಂಘದ ಉಪಾಧ್ಯಕ್ಷ ರವಿ ಕೋಟಾರಗಸ್ತಿ ಹೇಳಿದರು.

ಇಲ್ಲಿನ ವೈಭವ ನಗರದ ವೈಭವ ಹಾಲ್ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿವಿಧ ಸಂಘಟನೆಯವರು ತಮ್ಮ ಸಮುದಾಯಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುತ್ತಾರೆ. ಆದರೆ, ಈ ಸಂಘ ಭಾಷಾತೀತವಾಗಿ ಮತ್ತು ಜಾತ್ಯತೀತವಾಗಿ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುತ್ತಿದೆ. ಅದರಲ್ಲೂ ಈ ಬಡಾವಣೆಯ ಬಡ ವಿದ್ಯಾರ್ಥಿಗಳನ್ನು ಗುರುತಿಸಿದ್ದು ಹೆಮ್ಮೆಯ ಸಂಗತಿ ಎಂದರು.
ಸಾಧನೆಗೆ ಸಿರಿತನ, ಬಡತನ ಮುಖ್ಯವಲ್ಲ. ವಿದ್ಯಾರ್ಥಿಗಳು ತಮಗೆ ಲಭಿಸುವ ಅವಕಾಶಗಳನ್ನೇ ಸದ್ಬಳಕೆ ಮಾಡಿಕೊಂಡು ಸಾಧನೆಯ ಪಥದಲ್ಲಿ ಸಾಗಬೇಕು ಎಂದು ಕರೆ ಕೊಟ್ಟರು.
ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಜಿ.ರಾಮಯ್ಯ ಮಾತನಾಡಿ, ವಿವಿಧ ಇಲಾಖೆಯವರು ತಮ್ಮ ಇಲಾಖೆ ನೌಕರರ ಸಾಧಕ ಮಕ್ಕಳನ್ನು ಗುರುತಿಸಿ ಗೌರವಿಸುವುದು ಸಾಮಾನ್ಯ. ಆದರೆ, ಈ ಸಂಘ ಸರ್ಕಾರಿ ನೌಕರರ ಜತೆಗೆ, ಬಡ ಮಕ್ಕಳನ್ನು ಗುರುತಿಸಿ ಗೌರವಿಸುತ್ತಿರುವುದು ಪ್ರಶಂಸನೀಯ ಹೆಜ್ಜೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ದಯಾನಂದ ಕಿಣಿಗಿ ಮಾತನಾಡಿದರು.
ಪಿಯುಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ಕೋರ್ಸ್ ಗಳಲ್ಲಿ ಸಾಧನೆಗೈದ 50ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸದಸ್ಯರಾದ ಜಿ.ಎ.ಅಳಗುಂಡಗಿ, ಬಿ.ಎಸ್.ನಿಂಬಾಳ, ಆರ್.ಎಸ್.ಮೇತ್ರಿ, ಎಂ.ಎಚ್.ಮುಲ್ಲಾ, ಪಿ.ಪಿ.ಬಡಿಗೇರ, ಎಸ್.ಜಿ.ವೈದ್ಯ, ಎಂ.ಎಸ್.ಪಾಟೀಲ, ಎಸ್.ಜಿ. ನಾಗನೂರೆ, ಎಸ್.ಎಸ್.ಚರಂತಿಮಠ, ರಂಜನಾ ಪಾಟೀಲ, ಪದ್ಮಾವತಿ ಬಡಿಗೇರ ಇದ್ದರು.