
ಪ್ರಗತಿವಾಹಿನಿ ಸುದ್ದಿ: ದರ್ಮಸ್ಥಳ ಕೇಸ್ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಧರ್ಮಸ್ಥಳ ಚಲೋ ಕೈಗೊಂಡಿದ್ದು, ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವರು, ಧರ್ಮಸ್ಥಳದ ಕೇಸ್ ಎನ್ಐಎಗೆ ವಹಿಸಲ್ಲ. ಬಿಜೆಪಿಯವರು ಮಂಜುನಾಥನ ದರ್ಶನಕ್ಕೆ ಹೋಗಿ ಬರಲಿ. ಇದರಲ್ಲಿ ರಾಜಕೀಯ ಮಾಡಲ್ಲ. ಹೀಗೆ ತನಿಖೆ ಮಾಡಿ ಹಾಗೆ ತನಿಖೆ ಮಾಡಿ ಎಂದು ಹೇಳಲು ನಾವು ಯಾರು?ತನಿಖೆಗೆ ಏನು ಅವಶ್ಯಕತೆ ಇದೆಯೋ ಅದನ್ನು ಪೊಲೀಸರು ಮಾಡುತ್ತಾರೆ. ಈ ಕೇಸ್ ನಲ್ಲಿ ಮಂಪರು ಪರೀಕ್ಷೆ ಬೇಕೋ ಬೇಡವೋ ಎಂಬುದನ್ನ ನಾನು ನಿರ್ಧಾರ ಮಾಡಲು ಸಾಧ್ಯವಿಲ್ಲ. ಎಸ್ಐಟಿ ಸರಿಯಾಗಿ ತನಿಖೆ ಮಾಡುತ್ತಿದೆ. ಪ್ರಕರಣವನ್ನು ಎನ್ಐಎಗೆ ವಹಿಸುವ ಅಗತ್ಯ ಇಲ್ಲ ಎಂದರು.
ನಾಯಕರ ಹೇಳಿಕೆಗಳಿಂದ ಸತ್ಯ ಹೊರಬರುವುದಿಲ್ಲ. ಮೊದಲು ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಿ. ತನಿಖೆಗೆ ಸಮಯವನ್ನು ನಿಗದಿ ಮಾಡಲು ಸಾದ್ಯವಿಲ್ಲ.ಇಷ್ಟೇ ಅವಧಿಯಲ್ಲಿ ತನಿಖೆ ಮಾಡಿ ಎಂದು ಹೇಳಲು ಹೇಗೆ ಸಾಧ್ಯ? ಆದಷ್ಟು ಬೇಗ ತನಿಖೆ ಮುಗಿಸಿ ಎಂದು SIT ಗೆ ಹೇಳಿದ್ದೇನೆ ಎಂದು ಹೇಳಿದರು.
ಇನ್ನು, ಧರ್ಮಸ್ಥಳಕ್ಕೆ ರ್ಯಾಲಿಗಳ ವಿಚಾರಕ್ಕೆ, ಅವರೆಲ್ಲಾ ಮಂಜುನಾಥನ ದರ್ಶನ ಮಾಡಲು ಹೋಗುತ್ತಿರಬೇಕು, ಹೋಗಲಿ ಬಿಡಿ. ಮಂಜುನಾಥನ ದರ್ಶನಕ್ಕೆ ಹೋಗುವವರನ್ನು ತಡೆಯಲು ಸಾಧ್ಯನಾ..?ಪ್ರಕರಣವನ್ನು ಯಾರು ರಾಜಕೀಯ ಮಾಡಬೇಡಿ ಎಂಬುದೇ ನನ್ನ ಮನವಿ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಮೈಸೂರಿನಲ್ಲಿ ಹೇಳಿಕೆ ನೀಡಿದರು.
ದಸರಾ ಉದ್ಘಾಟಕರ ಆಯ್ಕೆಗೆ ತಕರಾರು ವಿಚಾರಕ್ಕೆ ಪರಮೇಶ್ವರ್ ಮಾತಾಡಿದರು. ದಸರಾ ನಾಡ ಹಬ್ಬ ಯಾವುದೇ ಒಂದು ಜಾತಿಗೆ ಧರ್ಮಕ್ಕೆ ಸೀಮಿತವಲ್ಲ. ಒಂದು ಧರ್ಮವನ್ನು ಹೊರಗಿಟ್ಟು ದಸರಾ ಮಾಡಲು ಸಾಧ್ಯನಾ..? ಮಿರ್ಜಾ ಇಸ್ಮಾಯಿಲ್ ದಿವಾನರಾಗಿ ದಸರಾ ಮಾಡಿಲ್ವಾ..? ಕವಿ ನಿಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಿಲ್ವಾ.?ಇದಕ್ಕೆಲ್ಲಾ ತಕರಾರು ತೆಗೆಯಬಾರದು. ಚಾಮುಂಡಿ ತಾಯಿ ನಂಬುತ್ತಾರೋ ಬಿಡುತ್ತಾರೋ ಅದು ಅವರಿಗೆ ಸೇರಿದ್ದು. ಇದು ಊರ ಹಬ್ಬ ಎಲ್ಲರೂ ಸೇರಿಯೇ ಮಾಡಬೇಕು ಎಂದು ತಿಳಿಸಿದರು.