*ನಿಲಜಿಯಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನ: ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ನಗರದ ಹೊರವಲಯದಲ್ಲಿರುವ ನಿಲಜಿ ಗ್ರಾಮದಲ್ಲಿ ಸುಮಾರು 1 ಕೋಟಿ ರೂ,ಗಳ ವೆಚ್ಚದಲ್ಲಿ ಶ್ರೀ ಬ್ರಹ್ಮಲಿಂಗ ದೇವರ ದೇವಸ್ಥಾನದ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಶನಿವಾರ ಕಟ್ಟಡ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮಸ್ಥರ ಬಹುದಿನಗಳ ಬೇಡಿಕೆಯಂತೆ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ. ನವರಾತ್ರಿಯ ಶುಭ ಸಂದರ್ಭದಲ್ಲಿ ಪವಿತ್ರವಾದ ಬ್ರಹ್ಮಲಿಂಗ ದೇವರ ಮಂದಿರದ ಸಮುದಾಯ ಭವನ ನಿರ್ಮಾಣದ ಪೂಜೆ ನೆರವೇರಿಸುತ್ತಿರುವುದು ಸಂತೋಷವನ್ನುಂಟು ಮಾಡಿದೆ. ಕ್ಷೇತ್ರದಾದ್ಯಂತ ನಿರಂತರವಾಗಿ ಮಂದಿರ, ಸಮುದಾಯ ಭವನ, ಶಾಲಾ ಕೊಠಡಿ, ಅಂಗನವಾಡಿ ಕಟ್ಟಡಗಳ ನಿರ್ಮಾಣ ಮಾಡಲಾಗುತ್ತಿದೆ. ಅಭಿವೃದ್ಧಿ ಮಾಡುವ ಮೂಲಕ ನನಗೆ ಮತ ಹಾಕಿದ ಕ್ಷೇತ್ರದ ಜನರಲ್ಲಿ ಸಾರ್ಥಕ ಭಾವನೆ ಮೂಡುವಂತೆ ಮಾಡುತ್ತಿದ್ದೇನೆ ಎಂದು ಹೇಳಿದರು.

ಒಂದು ಕೋಟಿ ರೂ. ವೆಚ್ಚದಲ್ಲಿ ಅತ್ಯಂತ ಸುಂದರವಾಗಿ ಸಮುದಾಯ ಭವನ ನಿರ್ಮಾಣವಾಗಲಿದೆ. ಸಮುದಾಯದ ಎಲ್ಲ ಚಟುವಟಿಕೆಗಳಿಗೆ ಈ ಭವನ ಆಸರೆಯಾಗಲಿದೆ. ಆದಷ್ಟು ಬೇಗ ಸುಸಜ್ಜಿತವಾಗಿ ಕಾಮಗಾರಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳೋಣ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಗುರೂಜಿ, ಶಂಕರಗೌಡ ಪಾಟೀಲ, ನಾಗೇಶ ದೇಸಾಯಿ, ಸತೀಶ್ ದನುಟ್ಕರ್, ಮನೋಹರ್ ಬಾಂಡಗಿ, ಮನೋಹರ್ ಬೆಳಗಾಂವ್ಕರ್, ಸುರೇಶ್ ಪಾಟೀಲ, ನಿಂಗಪ್ಪ ಮೊದಗೇಕರ್, ಗೋವಿಂದ ಪಾಟೀಲ, ಉಮೇಶ ಮೊದಗೇಕರ್, ವಿನಾಯಕ ಮೊದಗೇಕರ್, ದೀಪಕ್ ಕಾತಕರ್, ಚಂದು, ರವಿ, ವಿನಂತಿ ಗೊಮನಾಚಿ, ಬ್ರಹ್ಮಲಿಂಗ ಕಮಿಟಿಯ ಸದಸ್ಯರು, ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ರೈತ ಸಂಘಟನೆಯ ಸದಸ್ಯರು ಹಾಗೂ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.