
ಪ್ರಗತಿವಾಹಿನಿ ಸುದ್ದಿ : ದುಬೈ ಏರ್ ಶೋನಲ್ಲಿ ಪ್ರದರ್ಶನ ನೀಡುತ್ತಿದ್ದ ಭಾರತೀಯ ವಾಯುಸೇನೆಯ ತೇಜಸ್ ಯುದ್ಧ ವಿಮಾನ ಪತನಗೊಂಡಿದೆ. ಈ ದುರಂತದಲ್ಲಿ ಭಾರತೀಯ ವಾಯುಸೇನೆಯ ಸಮರ್ಥ ಪೈಲಟ್, ವಿಂಗ್ ಕಮಾಂಡರ್ ನಿಮಾಂಶ್ ಸ್ಯಾಲ್ ಹುತಾತ್ಮರಾಗಿದ್ದಾರೆ.
ಈ ಘಟನೆಯಿಂದ ದೇಶಕ್ಕೆ ತೀವ್ರ ಆಘಾತ ತಂದಿದೆ. ನಿಯಂತ್ರಣ ತಪ್ಪಿದ ವಿಮಾನವು ನೆಲಕ್ಕೆ ಅಪ್ಪಳಿಸಿ ಕ್ಷಣಾರ್ಧದಲ್ಲಿ ಬೆಂಕಿ ಜ್ವಾಲೆಗೆ ಆಹುತಿಯಾಗಿದೆ. ತೇಜಸ್ ಯುದ್ಧ ವಿಮಾನ ಹಾರಾಟದಲ್ಲಿ ಅಪಾರ ಅನುಭವ ಹೊಂದಿದ್ದ ನಿಮಾಂಶ್, ತಮ್ಮ ವೃತ್ತಿಪರತೆ ಮತ್ತು ತಾಳ್ಮೆಗೆ ಹೆಸರಾಗಿದ್ದರು.
ತಮ್ಮ ಜೀವದ ಹಂಗು ತೊರೆದು, ಕೊನೆಯ ಕ್ಷಣದವರೆಗೂ ತೇಜಸ್ ಯುದ್ಧ ವಿಮಾನವನ್ನು ನಿಯಂತ್ರಣಕ್ಕೆ ತರಲು ಹೋರಾಡಿದ ವಿಂಗ್ ಕಮಾಂಡರ್ ನಿಮಾಂಶ್ ಸ್ಯಾಲ್ ದುರಂತ ಅಂತ್ಯ ಕಂಡಿದ್ದಾರೆ.
ವಿಂಗ್ ಕಮಾಂಡರ್ ನಿಮಾಂಶ್ ಸ್ಯಾಲ್, ತೇಜಸ್ ಸೇರಿದಂತೆ ಹಲವು ಯುದ್ಧ ವಿಮಾನಗಳ ಹಾರಾಟದಲ್ಲಿ ಯಾವುದೇ ಸವಾಲನ್ನು ಯಶಸ್ವಿಯಾಗಿ ಎದುರಿಸಿದವರು. ದುಬೈ ಏರ್ ಶೋನಲ್ಲಿ ತೇಜಸ್ ನಿಯಂತ್ರಣ ತಪ್ಪಿದಾಗ, ಸ್ವಯಂ ರಕ್ಷಣೆಗಾಗಿ ವಿಮಾನದಿಂದ ಇಜೆಕ್ಟ್ ಆಗಲು ಅತ್ಯಂತ ಕಡಿಮೆ ಸಮಯಾವಕಾಶವಿತ್ತು. ಪ್ಯಾರಾಚೂಟ್ ಬಳಸಿ ಪಾರಾಗುವ ಸಾಧ್ಯತೆಗಳು ಕ್ಷೀಣವಾಗಿದ್ದರೂ,ಅವರು ಆ ಪ್ರಯತ್ನ ಮಾಡಬಹುದಿತ್ತು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೆ, ನಿಮಾಂಶ್ ತಮ್ಮ ವೈಯಕ್ತಿಕ ಸುರಕ್ಷೆಗಿಂತಲೂ ವಿಮಾನವನ್ನು ಉಳಿಸಲು ಆದ್ಯತೆ ನೀಡಿ, ಕೊನೆಯ ಉಸಿರಿರುವವರೆಗೂ ಅದನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿ ವಿಫಲರಾಗಿದ್ದಾರೆ.




