
ಪ್ರಗತಿವಾಹಿನಿ ಸುದ್ದಿ: ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಸಂಭವಿಸಿದೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬೀರನಳ್ಳಿ ಗ್ರಾಮದ ಸಮೀಪ ಕಾಗಿಣಾ ನದಿಯಲ್ಲಿ ಐದು ಮಂದಿ ಸ್ನೇಹಿತರು ಸೇರಿ ನದಿಗೆ ತೆರಳಿದ್ದರು. ಇವರಲ್ಲಿ ಮೂವರಿಗೆ ಈಜು ಬಾರದ ಕಾರಣ ಅವರು ನದಿ ದಡದಲ್ಲೇ ಸ್ನಾನ ಮಾಡುತ್ತಿದ್ದರು. ಉಳಿದ ಇಬ್ಬರು ಮಾತ್ರ ಈಜಲು ನದಿಗೆ ಇಳಿದಿದ್ದರು. ಆದರೆ ನೀರಿನ ಹರಿವು ಜಾಸ್ತಿಯಾಗಿದ್ದರಿಂದ ಅಥವಾ ಆಳ ತಿಳಿಯದೆ ದಡಕ್ಕೆ ಮರಳಲು ಸಾಧ್ಯವಾಗದೆ ಅವರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧಕಾರ್ಯ ಆರಂಭಿಸಿದ್ದಾರೆ. ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಸ್ಥಳೀಯರು ಸಹ ಹುಡುಕಾಟದಲ್ಲಿ ಸಹಕರಿಸುತ್ತಿದ್ದಾರೆ.



