*ಬಿಮ್ಸ್ ನಲ್ಲಿ ಸ್ಟಾಫ್ ನರ್ಸ್ ಮೇಲೆ ಹಲ್ಲೆ: ತುರ್ತು ಚಿಕಿತ್ಸಾ ಘಟಕ ಬಂದ್ ಮಾಡಿ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ನೀರು ಚೆಲ್ಲಬೇಡ ಎಂದು ಸ್ಟಾಫ್ ನರ್ಸ್ ರೋಗಿಗೆ ಹೇಳಿದ್ದಕ್ಕೆ ರೋಗಿ ಕಡೆಯವರು ಸ್ಟಾಫ್ ನರ್ಸ್ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ಬುಧವಾರ ಬೆಳಗಾವಿ ನಗರದ ಬಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ ಎದುರು ತುರ್ತು ಚಿಕಿತ್ಸೆ ಘಟಕ ಬಂದ್ ಮಾಡಿ ಆಸ್ಪತ್ರೆಯ ಎಲ್ಲಾ ಸ್ಟಾಫ್ ನರ್ಸ್ ಗಳು ಪ್ರತಿಭಟಿಸಿದರು.
ಮಾನಸಿಕ ಅಸ್ವಸ್ಥತೆ ಹುಡುಗಿಗೆ ಕೈ ಹಿಡಿದು ನಡೆಸಿದ ಸ್ಟಾಫ್ ನರ್ಸ್ ಬಸವರಾಜ ಕಬಾಡಗಿ ಮೇಲೆ ಮಾನಸಿಕ ಅಸ್ವಸ್ಥ ಹುಡುಗಿಯ ಕಡೆಯವರಿಂದ ಹಲ್ಲೆ ನಡೆಸಲಾಗಿದೆ. ಪ್ರತಿಭಟನಾ ಸ್ಥಳಕ್ಕೆ ಬಿಮ್ಸ್ ನಿರ್ದೇಶಕ ಅಶೋಕ ಶೆಟ್ಟಿ ಭೇಟಿ ನೀಡಿ, ಸ್ಟಾಫ್ ನರ್ಸ್ ಗಳ ಜೊತೆ ಮಾತನಾಡಿ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದರು. ಈ ಬಗ್ಗೆ ಈಗಾಗಲೇ ಎಪಿಎಮ್ ಸಿ ಪೊಲೀಸ್ ಠಾಣೆಯಲ್ಲಿ ದೂರು ಕೊಡಲಾಗಿದೆ. ಹಲ್ಲೆಗೊಳಗಾದ ಬಸವರಾಜಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಡಿಸಿ ಹಾಗೂ ಕಮೀಷನರ್ ಗೆ ನಾವು ದೂರು ಕೊಡುತ್ತೇವೆ. ನಮಗೆ ಆಸ್ಪತ್ರೆಯಲ್ಲಿ ರಕ್ಷಣೆ ಕೊಡಿ ಅಂತ ಮನವಿ ಮಾಡುತ್ತೇವೆ ಎಂದು ಬಿಮ್ಸ್ ನಿರ್ದೇಶಕ ಅಶೋಕ ಶೆಟ್ಟಿ ತಿಳಿಸಿದರು.



