
ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಈಗಾಗಲೇ ಕಾಂಗ್ರೆಸ್ ಬೆಂಬಲ ಘೋಷಿಸಿದ್ದು, ಇದೀಗ ಎಡಪಕ್ಷಗಳಾದ ಸಿಪಿಐ, ಸಿಪಿಐ-ಎಂ ಮತ್ತು ವಿಸಿಕೆ ಪಕ್ಷಗಳು ವಿಜಯ್ ಅವರಿಗೆ ಬೆಂಬಲ ನೀಡಲು ನಿರ್ಧರಿಸಿವೆ. ಈ ಮೂಲಕ ನಟ ವಿಜಯ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್ ಆದಂತೆ ಆಗಿದೆ.
ಸಿಪಿಐ ಕಾರ್ಯಕಾರಿ ಸಮಿತಿ ಹಾಗೂ ಸಿಪಿಐ-ಎಂ ರಾಜ್ಯ ಸಮಿತಿಗಳು ಇಂದು ಸಭೆ ನಡೆಸಿ ವಿಜಯ್ ಅವರಿಗೆ ಬೆಂಬಲ ನೀಡುವ ನಿರ್ಧಾರವನ್ನು ತೆಗೆದುಕೊಂಡಿವೆ. ಇವರೊಂದಿಗೆ ವಿಸಿಕೆ ಪಕ್ಷದ ಇಬ್ಬರು ಶಾಸಕರು ಕೂಡ ದಳಪತಿ ಪರ ನಿಂತಿದ್ದಾರೆ. ಈ ಮೂರೂ ಪಕ್ಷಗಳು ಇಂದು ಸಂಜೆ 4:30ಕ್ಕೆ ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದು, ಅಧಿಕೃತವಾಗಿ ತಮ್ಮ ಬೆಂಬಲವನ್ನು ಘೋಷಿಸಲಿವೆ. ಇದರೊಂದಿಗೆ 108 ಸ್ಥಾನ ಗೆದ್ದಿದ್ದ ವಿಜಯ್ ಅವರಿಗೆ ಈಗ ಇತರ ಸಣ್ಣ ಪಕ್ಷಗಳ ಬೆಂಬಲ ಸೇರಿದಂತಾಗಿದ್ದು, ಬಹುಮತದ ಕೊರತೆ ನೀಗಿದೆ.
ಬಹುಮತಕ್ಕೆ ಅಗತ್ಯವಿರುವ ಸಂಖ್ಯಾಬಲ ಕ್ರೋಢೀಕರಿಸಿದ ಬೆನ್ನಲ್ಲೇ, ವಿಜಯ್ ಅವರು ಇಂದು ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಡಿ ನೀಡಿ, ಬೆಂಬಲ ನೀಡಿದ ಪಕ್ಷಗಳ ಶಾಸಕರ ಸಹಿ ಇರುವ ಪತ್ರದೊಂದಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.

