Film & EntertainmentKarnataka NewsLatest

*ದೊಡ್ಡಣ್ಣ ನಿಧನ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದ ಕಿಡಿಗೇಡಿಗಳ ವಿರುದ್ಧ ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ: ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರು ನಿಧನರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ ಕಿಡಿಗೇಡಿಗಳಿಗೆ ಇದೀಗ ಸಂಕಷ್ಟ ಶುರುವಾಗಿದೆ.

ತಾವಿನ್ನೂ ಆರೋಗ್ಯವಾಗಿ ಬದುಕಿರುವಾಗಲೇ ‘ಸತ್ತಿದ್ದಾರೆ’ ಎಂದು ಸುಳ್ಳು ಪೋಸ್ಟ್ ಹಾಕಿ ವಿಕೃತ ಆನಂದ ಪಟ್ಟವರ ವಿರುದ್ಧ ಹಿರಿಯ ನಟ ದೊಡ್ಡಣ್ಣ ಅವರು ಖುದ್ದಾಗಿ ಬೆಂಗಳೂರು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ನಟ ದೊಡ್ಡಣ್ಣ ಅವರ ಈ ದಿಟ್ಟ ಹೆಜ್ಜೆಯಿಂದಾಗಿ, ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವೀವ್ಸ್‌ಗಾಗಿ ಇಂತಹ ಕೆಟ್ಟ ಕೆಲಸ ಮಾಡುತ್ತಿದ್ದ ಕಿಡಿಗೇಡಿಗಳಿಗೆ ಈಗ ನಡುಕ ಶುರುವಾಗಿದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದ ‘ಪಬ್ಲಿಕ್ ಫ್ರೆಂಡ್’ (Public Friend) ಎಂಬ ಖಾತೆಯಲ್ಲಿ ನಟ ದೊಡ್ಡಣ್ಣ ಅವರು ಇನ್ನಿಲ್ಲ ಎಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿತ್ತು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ದೊಡ್ಡಣ್ಣ ಅವರ ಅಭಿಮಾನಿಗಳು ಹಾಗೂ ಚಿತ್ರರಂಗದ ಆಪ್ತರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಇದಾದ ಬೆನ್ನಲ್ಲೇ ಸ್ವತಃ ದೊಡ್ಡಣ್ಣ ಅವರೇ ಮಾಧ್ಯಮಗಳ ಮುಂದೆ ಬಂದು, ‘ನಾನು ಚೆನ್ನಾಗಿದ್ದೇನೆ, ಆರೋಗ್ಯವಾಗಿದ್ದೇನೆ, ದಯವಿಟ್ಟು ಸುಳ್ಳು ಸುದ್ದಿ ನಂಬಬೇಡಿ’ ಎಂದು ಸ್ಪಷ್ಟನೆ ನೀಡಿದ್ದರು.

ದೊಡ್ಡಣ್ಣ ಅವರ ಬಗ್ಗೆ ಈ ರೀತಿ ನಿಧನದ ಸುದ್ದಿ ಹರಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಕೆಲವು ವರ್ಷಗಳಿಂದಲೂ ಆಗಾಗ ಇಂತಹ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ. ಪ್ರತಿ ಬಾರಿಯೂ ಸುಮ್ಮನಾಗುತ್ತಿದ್ದ ದೊಡ್ಡಣ್ಣ, ಈ ಬಾರಿ ಮಾತ್ರ ಕಿಡಿಗೇಡಿಗಳಿಗೆ ಸರಿಯಾದ ಪಾಠ ಕಲಿಸಲೇಬೇಕು ನಿರ್ಧರಿಸಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

Home add -Advt

‘ನಾನು ಬದುಕಿರುವಾಗಲೇ ಸತ್ತಿದ್ದೇನೆ ಎಂದು ಪೋಸ್ಟ್ ಹಂಚಿಕೊಳ್ಳಲಾಗಿದೆ. ಎಐ ಮೂಲಕ ಎಡಿಟ್ ಮಾಡಿ ವೈರಲ್ ಮಾಡಿರುವುದರಿಂದ ನನಗೆ ತೀವ್ರ ಮಾನಸಿಕ ನೋವು ಹಾಗೂ ಅತೀವ ಆಘಾತ ಉಂಟಾಗಿದೆ. ನನ್ನ ಕುಟುಂಬಸ್ಥರು ಮತ್ತು ಅಭಿಮಾನಿಗಳು ಈ ವದಂತಿಯಿಂದ ನೊಂದಿದ್ದಾರೆ. ಆದ್ದರಿಂದ ಇಂತಹ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೊಡ್ಡಣ್ಣ ದೂರಿನಲ್ಲಿ ಆಗ್ರಹಿಸಿದ್ದಾರೆ.

ದೂರನ್ನು ಗಂಭೀರವಾಗಿ ಪರಿಗಣಿಸಿರುವ ಸೈಬರ್ ಪೊಲೀಸರು, ಆರೋಪಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Related Articles

Back to top button