*ಬೆಳಗಾವಿ ಗಡಿ ವಿವಾದ: ಸರ್ವಪಕ್ಷ ಸಭೆ ನಡೆಸಿದ ಮಹಾ ಸರ್ಕಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗಡಿ ವಿವಾವದ ಸಂಬಂಧ ಮುಂಬೈನ ವಿಧಾನಭವನದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಮಾತನಾಡಿದ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, 2004ರಿಂದ ಸುಪ್ರೀಂಕೋರ್ಟ್ ಅಂಗಳದಲ್ಲಿರುವ ಈ ಗಡಿ ವಿವಾದದ ತ್ವರಿತ ವಿಚಾರಣೆ ಕೋರಿ ಶೀಘ್ರದಲ್ಲೇ ಹೊಸ ಅರ್ಜಿ ಸಲ್ಲಿಸುವುದಾಗಿ ಪ್ರಕಟಿಸಿದ್ದಾರೆ.
ಗಡಿ ಭಾಗದಲ್ಲಿರುವ ಮರಾಠಿ ಭಾಷಿಕರ ಪರವಾಗಿ ಇಡೀ ಮಹಾರಾಷ್ಟ್ರ ನಿಲ್ಲಲಿದೆ ಎಂದು ಭರವಸೆ ನೀಡಿರುವ ಫಡ್ನವೀಸ್, ಕರ್ನಾಟಕದಲ್ಲಿರುವ ಮರಾಠಿ ಹೋರಾಟಗಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಉಚಿತ ವಕೀಲರನ್ನು ನೇಮಿಸಿ, ಸಂಪೂರ್ಣ ಆರ್ಥಿಕ ಹಾಗೂ ಕಾನೂನು ನೆರವು ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ಸಂಸದರ ಮೂಲಕ ರಾಷ್ಟ್ರೀಯ ಭಾಷಾ ಅಲ್ಪಸಂಖ್ಯಾತರ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ.
ನ್ಯಾಯಾಲಯದ ಹೋರಾಟದ ಜೊತೆಯಲ್ಲೇ, ವಿಷಯವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲು ಮಹಾರಾಷ್ಟ್ರ ಮುಂದಾಗಿದೆ. ಇದಕ್ಕಾಗಿ ಉಭಯ ರಾಜ್ಯಗಳ ತಲಾ ಮೂವರು ಸಚಿವರ ನೇತೃತ್ವದಲ್ಲಿ ಜಂಟಿ ಸಭೆ ಆಯೋಜಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆಯಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಮೂರು ದಶಕಗಳ ಬಳಿಕ ಹಿರಿಯ ನಾಯಕ ಶರದ್ ಪವಾರ್ ಈ ಸಭೆಯಲ್ಲಿ ಭಾಗವಹಿಸಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದು ವಿಶೇಷವಾಗಿತ್ತು.
ಈ ಮೂಲಕ ಕರ್ನಾಟಕದ ಅವಿಭಾಜ್ಯ ಅಂಗವಾದ ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಮತ್ತೆ ಕ್ಯಾತೆ ತೆಗೆದಿದೆ.
ಈ ಸಭೆಯಲ್ಲಿ ಮಹಾರಾಷ್ಟ್ರ ಸಿಎಂ ದೆವೇಂದ್ರ ಫಡ್ನವಿಸ್, ಡಿಸಿಎಂಗಳಾದ ಏಕನಾಥ್ ಶಿಂಧೆ, ಸುನೇತ್ರಾ ಅಜೀತ ಪವಾರ, ಎನ್ಸಿಪಿ ಹಿರಿಯ ಮುಖಂಡ ಶರತ್ ಪವಾರ, ವಿರೋಧ ಪಕ್ಷದ ನಾಯಕ ಜಯಂತ ಪಾಟೀಲ್, ಸಚಿವ ನಾರಾಯಣ ರಾಣೆ, ಬೆಳಗಾವಿಯ ಎಂಇಎಸ್ ಅಧ್ಯಕ್ಷ ಪ್ರಕಾಶ ಮರಗಾಳೆ, ಮಾಜಿ ಶಾಸಕ ಮನೋಹ ಕಿಣೆಕರ್, ಅನೇಕ ಜನ ಮಹಾರಾಷ್ಟ್ರ ಶಾಸಕರು, ಮಾಹಾರಾಷ್ಟ್ರದ ಎಲ್ಲಾ ಪಕ್ಷಗಳ ಮುಖಂಡರು ಈ ಸಭೆಯಲ್ಲಿ ಉಪಸ್ಥಿತರಿದ್ದರು.




