
ಯರ್ರಿಸ್ವಾಮಿ ವಿರುದ್ಧ ಎಫ್ಐಆರ್: MLC ಸೀಟ್ ಆಮಿಷ ತೋರಿ 1.5 ಕೋಟಿ ವಂಚನೆ ಆರೋಪ
ಪ್ರಗತಿವಾಹಿನಿ ಸುದ್ದಿ/ ಬೆಂಗಳೂರು: ವಿಧಾನ ಪರಿಷತ್ ಸದಸ್ಯತ್ವದ ನಾಮನಿರ್ದೇಶನ ಮಾಡಿಸುತ್ತೇನೆ ಎಂದು ನಂಬಿಸಿ ಮಹಿಳೆಯರಿಂದ ಕೋಟ್ಯಂತರ ರೂ. ಪಡೆದು ವಂಚಿಸಿದ ಆರೋಪದ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದ ವ್ಯಕ್ತಿ ಎಂದು ಹೇಳಿಕೊಂಡಿದ್ದ ಪತ್ರಕರ್ತ ಯರ್ರಿಸ್ವಾಮಿ ಮತ್ತು ಅವರ ಸಹಚರಾದ ಸಿದ್ದರಾಜು, ಬಸವರಾಜು ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೂರಿನ ವಿವರ:
ಮಂಗಳೂರು ಮೂಲದ 54 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನಲ್ಲಿ, 2024 ರಲ್ಲಿ ವಿಧಾನಸೌಧದಲ್ಲಿ ಯರ್ರಿಸ್ವಾಮಿ ಪರಿಚಯವಾಗಿದ್ದರು. ತಾವು ಕಾಂಗ್ರೆಸ್ ಮಾಧ್ಯಮ ವಕ್ತಾರ, ಎಐಸಿಸಿ ನಾಯಕ ರಣದೀಪ್ ಸುರ್ಜೇವಾಲ ಅವರ ಆಪ್ತ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಆತ್ಮೀಯರು ಎಂದು ಹೇಳಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಮೊದಲಿಗೆ 5 ಕೋಟಿ ರೂ. ನೀಡಿದರೆ ವಿಧಾನ ಪರಿಷತ್ ಸದಸ್ಯತ್ವ ಕೊಡಿಸುತ್ತೇನೆ ಎಂದು ನಂಬಿಸಿದ್ದರು. ನಂತರ ಮಾತುಕತೆ 1.25 ಕೋಟಿ ರೂ.ಗೆ ಫೈನಲ್ ಆಯಿತು. ಈ ಪೈಕಿ 1 ಕೋಟಿ ರೂ. ಹಣವನ್ನು ಕೆಂಪೇಗೌಡ ರಸ್ತೆಯ ಶಿಕ್ಷಕರ ಸದನದಲ್ಲಿ ಯರ್ರಿಸ್ವಾಮಿಯ ಸಹಚರಾದ ಬಸವರಾಜು ಮತ್ತು ಸಿದ್ದರಾಜುಗೆ ನೀಡಲಾಗಿದೆ.
ಇದಲ್ಲದೆ ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆ ಬಳಿ ಮತ್ತೊಬ್ಬ ಮಹಿಳೆಗೆ 5 ಲಕ್ಷ ರೂ. ಕೊಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೋಟೆಲ್ನಲ್ಲಿ ಅನುಚಿತ ವರ್ತನೆ ಆರೋಪ
ದೂರಿನಲ್ಲಿ ಮತ್ತೊಂದು ಗಂಭೀರ ಆರೋಪವೂ ಇದೆ. ಹೊಸದಿಲ್ಲಿಗೆ ಕರೆದೊಯ್ದ ಯರ್ರಿಸ್ವಾಮಿ ಹೋಟೆಲ್ನಲ್ಲಿ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದರು. ಕೆಲ ತಿಂಗಳ ಬಳಿಕ ಯರ್ರಿಸ್ವಾಮಿ MLC ಸ್ಥಾನದ ಸುಳ್ಳು ಭರವಸೆ ನೀಡಿ ಹಣ ಪಡೆದಿದ್ದು ಗೊತ್ತಾಯಿತು ಎಂದು ಮಹಿಳೆ ಹೇಳಿದ್ದಾರೆ.
ಹಣ ವಾಪಸ್ ಕೇಳಿದಾಗ ಜೀವ ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರುದಾರರ ಹಿನ್ನೆಲೆ
ದೂರು ನೀಡಿರುವ ಮಹಿಳೆ ದೂರುದಾರ ಟ್ರಸ್ಟ್ ಮೂಲಕ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.




