*ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರನ್ನು ಬಂಧಿಸಿದ ಸಿಐಡಿ*

ಪ್ರಗತಿವಾಹಿನಿ ಸುದ್ದಿ : ಕೆಪಿಎಸ್ಸಿ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರನ್ನು ತಡರಾತ್ರಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ವಿಚಾರಣೆಗೂ ಮುನ್ನವೇ ಪರಾರಿಯಾಗಲು ಯತ್ನಿಸಿದ್ದ ಗ್ಯಾನೇಂದ್ರ ಕುಮಾರ್ ಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಿಕೊಳ್ಳಲಾಗಿತ್ತು. ವಿಚಾರಣೆ ವೇಳೆ ಅಸಹಕಾರ ನೀಡಿರುವ ಆರೋಪದ ಮೇಲೆ ಪೊಲೀಸರ ಬಂಧನಕ್ಕೆ ಒಳಪಡಿಸಿದ್ದಾರೆ.
ಶುಕ್ರವಾರ ಸತತವಾಗಿ 11 ತಾಸು ವಿಚಾರಣೆ ನಡೆಸಿದ್ದ ಪೊಲೀಸರು ಮತ್ತೆ ಶನಿವಾರ ಮಧ್ಯಾಹ್ನದಿಂದಲೇ ವಿಚಾರಣೆ ಮುಂದುವರೆಸಿದ್ದರು.
ಓಎಂಆರ್ ಶೀಟ್ ತಿದ್ದುಪಡಿ ಪ್ರಕರಣದಲ್ಲಿ ಗ್ಯಾನೇಂದ್ರ ಸಕ್ರಿಯ ಕೈವಾಡವಿರುವುದು ತನಿಖೆಯಲ್ಲಿ ಸಾಬೀತಾಗಿದ್ದು, ಅವರ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳು ಲಭ್ಯವಾಗಿವೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಪರೀಕ್ಷೆಗೆ ಮುನ್ನವೇ ಅಭ್ಯರ್ಥಿಗಳನ್ನು ಖಾಸಗಿ ರೆಸಾರ್ಟ್ಗಳಿಗೆ ಕರೆದೊಯ್ದು ಪ್ರಶೋತ್ತರ ಸಮೇತ ವಿಶೇಷ ತರಬೇತಿ ನೀಡಿದ ಗಂಭೀರ ಆರೋಪವೂ ಇವರ ಮೇಲಿದೆ.
ಐಎಎಸ್ ಅಧಿಕಾರಿ ಬಂಧನದ ಬೆನ್ನಲ್ಲೇ ಕೆಪಿಎಸ್ಸಿ ಉನ್ನತಾಧಿಕಾರಿಗಳು, ಪ್ರಮುಖ ಸದಸ್ಯರು ಹಾಗೂ ಶಿವಶಂಕರಪ್ಪ ಸೇರಿದಂತೆ ಹಲವು ಪ್ರಭಾವಿಗಳಿಗೆ ಬಂಧನದ ಭೀತಿ ಶುರುವಾಗಿದೆ. ತನಿಖೆ ತೀವ್ರಗೊಳಿಸಿರುವ ಸಿಐಡಿ ತಂಡ, ಈ ಹಗರಣದಲ್ಲಿ ಭಾಗಿಯಾಗಿರುವ ಇನ್ನಷ್ಟು ಪ್ರಮುಖರನ್ನು ಶೀಘ್ರದಲ್ಲೇ ಬಂಧಿಸುವ ಸಾಧ್ಯತೆಯಿದೆ.
ಕಳೆದ ಕೆಲವು ಸಮಯದಿಂದ ಇವರ ವಿರುದ್ಧ ನಡೆಯುತ್ತಿದ್ದ ವಿಚಾರಣೆ ವೇಳೆ, ಅಧಿಕಾರಿಗಳು ನಡೆಸಿದ ಸತತ ಶೋಧ ಹಾಗೂ ತನಿಖೆಯಿಂದ ಹಲವು ನಿರ್ಣಾಯಕ ದಾಖಲೆಗಳು ಮತ್ತು ಪ್ರಬಲ ಸಾಕ್ಷ್ಯಗಳು ಪತ್ತೆಯಾಗಿವೆ.
ಪ್ರಕರಣದ ಸುಳಿವು ಬೆನ್ನತ್ತಿದ ತನಿಖಾ ತಂಡವು ಅಕ್ರಮ ನಡೆದಿರುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದಂತೆ, ಯಾವುದೇ ವಿಳಂಬ ಮಾಡದೆ ತಡರಾತ್ರಿ ಗ್ಯಾನೇಂದ್ರ ಕುಮಾರ್ ಅವರನ್ನು ವಶಕ್ಕೆ ಪಡೆದು ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಲೆಹಾಕಲಾದ ಎಲ್ಲಾ ಸಾಕ್ಷಾಧಾರಗಳನ್ನು ಆಧಾರವಾಗಿಟ್ಟುಕೊಂಡು ಅಧಿಕಾರಿಗಳು ಬಂಧಿತ ಐಎಎಸ್ ಅಧಿಕಾರಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.




