*ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಿ ಸರ್: ಮಕ್ಕಳ ಮುಗ್ಧತೆಗೆ ಮನಸೋತ ಅಧಿಕಾರಿ*

ಪ್ರಗತಿವಾಹಿನಿ ಸುದ್ದಿ: ಮೂವರು ಬಾಲಕರು ಪೊಲೀಸ್ ಅಧಿಕಾರಿ ಎದುರು ನಿಂತು ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿ ಗಮನ ಸೇಳೆದಿದ್ದಾರೆ
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರ ಗ್ರಾಮದ ಮೂವರು ಬಾಲಕರು, ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕೋರಿ ಪೊಲೀಸ್ ಠಾಣೆಗೆ ಬಂದು ಸಿಪಿಐ ನಾಗರೆಡ್ಡಿ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ.
ಮಕ್ಕಳ ಮುಗ್ಧತೆ ಹಾಗೂ ಕಾನೂನಿನ ಬಗೆಗಿನ ಗೌರವಕ್ಕೆ ಮೆಚ್ಚಿದ ಅಧಿಕಾರಿ ಅವರ ಬೆನ್ನು ತಟ್ಟಿದ್ದಾರೆ. ಕೈಯಲ್ಲಿ ಅರ್ಜಿ ಹಿಡಿದಿದ್ದ ಅವರು ಸಿಪಿಐ ನಾಗರೆಡ್ಡಿ ಅವರಿಗೆ ನಾವು ಗಣೇಶ ಪ್ರತಿಷ್ಠಾಪನೆ ನೆರವೇರಿಸಿ ಕ್ವಿಜ್, ರಸಪ್ರಶ್ನೆ ಸ್ಪರ್ಧೆ ಹಮ್ಮಿಕೊಳ್ಳುತ್ತೇವೆ, ಅನುಮತಿ ಕೊಡಿ ಸರ್” ಎಂದು ಕೇಳಿಕೊಂಡರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಪಿಐ ನಾಗರೆಡ್ಡಿ ” ಮೂರ್ತಿ ಸ್ಥಾಪನೆಗೆ ಅನುಮತಿ ಕೇಳಲು ಬಂದ ಮಕ್ಕಳ ಮುಗ್ಧತೆ ಹಾಗೂ ಕಾನೂನಿನ ಬಗ್ಗೆ ಇರುವ ಗೌರವಕ್ಕೆ ಮನ ಸೋತಿತು. ಜತೆಗೆ ಜನಸ್ನೇಹಿ ಪೊಲೀಸ್ ಅಭಿಯಾನದಿಂದ ಮಕ್ಕಳೂ ಪೊಲೀಸ್ ಠಾಣೆಗೆ ಬರಲು ಧೈರ್ಯ ಮಾಡುತ್ತಿರುವ ವಿಷಯದ ಬಗ್ಗೆ ಹೆಮ್ಮೆಯಾಯಿತು” ಎಂದಿದ್ದಾರೆ.
ಮಕ್ಕಳ ಈ ಜವಾಬ್ದಾರಿಯುತ ನಡವಳಿಕೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.




