
ಪ್ರಗತಿವಾಹಿನಿ ಸುದ್ದಿ: 13 ವರ್ಷದ ಬಾಲಕನನ್ನು ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಯಲಹಂಕದ ವಿನಾಯಕ ನಗರದ ಪ್ರಜ್ವಲ್ (13) ಹತ್ಯೆಯಾದ ಬಾಲಕ. ಪ್ರಜ್ವಲ್ನ ಪಕ್ಕದ ಮನೆಯ ಭಾಸ್ಕರ್ ರೆಡ್ಡಿ ಎಂಬಾತ ಹಣಕ್ಕಾಗಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಕೊಲೆ ಬಳಿಕ ಆರೋಪಿ ಕಾರಿನಲ್ಲಿ ತೆರಳುವಾಗ ರಸ್ತೆಯಲ್ಲಿ ಸರಣಿ ಅಪಘಾತ ಎಸಗಿದ್ದಾನೆ. ಈ ವೇಳೆ ವಾಹನ ಸವಾರರು ತಡೆದು ಆತನನ್ನು ಪ್ರಶ್ನಿಸಿದ್ದಾರೆ. ಆಗ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರನ್ನು ಪರಿಶೀಲಿಸಿದಾಗ ಬಾಲಕನ ಶವ ಪತ್ತೆಯಾಗಿದೆ.
ಎರಡು ದಿನದ ಹಿಂದೆ ಗಣಪತಿ ಬಿಡಲು ಪಟಾಕಿ ತರಬೇಕೆಂದು ಬಾಲಕನನ್ನು ಭಾಸ್ಕರ್ ಕಾರಿನಲ್ಲಿ ಕರೆದೊಯ್ದಿದ್ದ. ಬಳಿಕ ಕಾರಿನಲ್ಲಿ ಪ್ರಜ್ವಲ್ನನ್ನು ಕೂರಿಸಿಕೊಂಡು ವಿಡಿಯೋ ಮಾಡಿ, ಹಣಕ್ಕಾಗಿ ಪೋಷಕರಿಗೆ ಬೆದರಿಕೆ ಹಾಕಿದ್ದ. ಬಳಿಕ ಎಣ್ಣೆ ಮತ್ತಿನಲ್ಲಿ ಬಾಲಕನಿಗೆ ಹಾಲೋಬ್ರಿಕ್ಸ್ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಮೃತದೇಹ ಕಾರಿನ ಡಿಕ್ಕಿಯಲ್ಲಿಟ್ಟು ಆಂಧ್ರಪ್ರದೇಶದ ಕಡೆಗೆ ಎಸ್ಕೇಪ್ ಆಗುತ್ತಿದ್ದ. ಈ ವೇಳೆ ಗಾಬರಿಯಲ್ಲಿ ಗೋಡೆಗೆ ಕಾರನ್ನು ಡಿಕ್ಕಿ ಹೊಡೆಸಿದ್ದ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಬಾಲಕನ ಶವ ಕಾರಿನ ಡಿಕ್ಕಿಯಲ್ಲಿ ಪತ್ತೆಯಾಗಿದೆ.
ಸದ್ಯ ಆರೋಪಿ ಭಾಸ್ಕರ್ ರೆಡ್ಡಿಯನ್ನು ಬಂಧಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


