ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ರೇಷ್ಮೆ ಉತ್ಪನ್ನಗಳಲ್ಲಿ ಆಸಕ್ತಿ ಹೊಂದಿರುವ ಸಾರ್ವಜನಿಕರು ಮತ್ತು ಮಹಿಳೆಯರು ಸರಕಾರಿ ಸ್ವಾಮ್ಯದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ (ಕೆ.ಎಸ್.ಐ.ಸಿ) ಉತ್ಪನ್ನವಾದ ಮೈಸೂರ್ ಸಿಲ್ಕ್ ಸೀರೆಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಹೇಳಿದರು.
ಫೆ.೧೯ ರಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆರಂಭವಾದ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರೇಷ್ಮೆ ಉತ್ಪನ್ನಗಳನ್ನು ಖರೀದಿಸುವುದರಿಂದ ರೇಷ್ಮೆ ಖರೀದಿಸಿದೆವು ಎಂಬ ಸಂತೋಷ ಸಿಗುತ್ತದೆ ಹಾಗೂ ರೇಷ್ಮೆ ಬೆಳೆಯುವ ರೈತರಿಗೆ, ಸೀರೆ ತಯಾರಿಸುವ ಶ್ರಮಿಕರಿಗೆ ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.
ಸಂಸ್ಥೆಯ ವ್ಯವಸ್ಥಾಪಕ ಭೀಮಪ್ಪ ಮಾತನಾಡಿ, ಭಾರತದಲ್ಲಿ ದೊರೆಯುವ ಇತರ ರೇಷ್ಮೆ ವಸ್ತ್ರಗಳಿಗಿಂತ ಮೈಸೂರ್ ಸಿಲ್ಕ್ ವಿಭಿನ್ನವಾಗಿದೆ. ಇದು ಹಳೆ ಮೈಸೂರು ಪ್ರದೇಶದಲ್ಲಿ ಪ್ರಾಕೃತಿಕ ರೇಷ್ಮೆ ಗೂಡಿನಿಂದ ದೊರೆಯುವ ಅತ್ಯುತ್ತಮ ರೇಷ್ಮೆಯಿಂದ ಮಾಡಲ್ಪಟ್ಟಿದ್ದು, ಬಟ್ಟೆಗಳಿಗೆ ವಿಶಿಷ್ಟ ಹೊಳಪು ಮತ್ತು ಭೌಗೋಳಿಕ ಸುವಾಸನೆಯನ್ನು ನೀಡುತ್ತದೆ. ಕೆಎಸ್ಐಸಿ ಮೈಸೂರು ಸಿಲ್ಕ್ ಸೀರೆಗಳು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಮಾರಾಟವಾಗುವ ಮತ್ತು ಬೇಡಿಕೆಯಲ್ಲಿರುವ ರೇಷ್ಮೆ ಸೀರೆಗಳಾಗಿವೆ. ಅದರಲ್ಲೂ ಮಹಿಳೆಯರಿಗೆ ವಿವಾಹ ಮತ್ತು ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ಬಹು ಅಚ್ಚುಮೆಚ್ಚಿನ ಆಯ್ಕೆಯ ಸೀರೆಗಳಾಗಿವೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಪ್ರೀತಂ ನಸಲಾಪುರೆ ಹಾಗೂ ಮಾರಾಟ ಮಳಿಗೆಯ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು. ಫೆ.೧೯ ರಿಂದ ೨೨ ರವರೆಗೆ ಪ್ರತಿದಿನ ಬೆಳಗ್ಗೆ ೧೦ ರಿಂದ ರಾತ್ರಿ ೮ ರವರೆಗೆ ನಾಲ್ಕು ದಿನಗಳ ಕಾಲ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.