Kannada NewsKarnataka NewsLatest

ಹೊರ ದೇಶಗಳಿಗೂ ನಂದಿನಿ ಕಳಿಸಲು ಬಾಲಚಂದ್ರ ಜಾರಕಿಹೊಳಿ ಆಸಕ್ತಿ

ಹೊಸದಾಗಿ ೫ ಸಾವಿರ ನಂದಿನಿ ಮಳಿಗೆಗಳು, ೧೦೦ ನಂದಿನಿ ಕೆಫೆ ಮೂ ಮಳಿಗೆಗಳ ಆರಂಭಕ್ಕೆ ಕೆಎಂಎಫ್ ಚಿಂತನೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಕಳೆದ ಎರಡು ವರ್ಷಗಳಿಂದ ಕೆಎಂಎಫ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ತೃಪ್ತಿ ತಮಗಿದೆ. ನಂದಿನಿ ಉತ್ಪನ್ನಗಳನ್ನು ದೇಶಾದ್ಯಂತ ವಿಸ್ತರಿಸಿ ಕೆಎಂಎಫ್‌ನ್ನು ನಂ.೧ ಸಂಸ್ಥೆಯನ್ನಾಗಿ ಪರಿವರ್ತಿಸುವ ಇರಾದೆ ಹೊಂದಿರುವುದಾಗಿ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಶುಕ್ರವಾರ ರಾತ್ರಿ ನಗರದ ಖಾಸಗಿ ಹೊಟೇಲ್‌ನಲ್ಲಿ ಕೆಎಂಎಫ್ ಅಧ್ಯಕ್ಷರಾಗಿ ಎರಡು ವರ್ಷ ಪೂರೈಸಿದ ನಿಮಿತ್ಯ ಜರುಗಿದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹಿರಿಯರ ಆಶಯದಂತೆ ಕೆಎಂಎಫ್‌ನ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿದರು.
ಈ ಸಾಲಿನಲ್ಲಿ ೯೦.೬೨ ಲಕ್ಷ ಲೀಟರ್ ಹಾಲು ಶೇಖರಿಸಿದ್ದು, ಇದೊಂದು ಗರಿಷ್ಠ ದಾಖಲೆಯಾಗಿದೆ. ಮುಂದಿನ ಮೂರು ವರ್ಷದ ಅವಧಿಯಲ್ಲಿ ೧.೩೫ ಕೋಟಿ ಲೀ ಹಾಲು ಶೇಖರಣೆ ಮಾಡುವ ಗುರಿ ಹೊಂದಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರು, ಕೋಲಾರ ಮತ್ತು ತುಮಕೂರು ಹಾಲು ಒಕ್ಕೂಟಗಳಲ್ಲಿ ಮಾತ್ರ ರಾಸುಗಳಿಗೆ ವಿಮೆಗೊಳಪಡಿಸಲಾಗಿತ್ತು. ಆದರೆ ಪ್ರಸಕ್ತ ಸಾಲಿನಿಂದ ಎಲ್ಲ ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ರಾಸುಗಳನ್ನು ವಿಮೆಗೆ ಒಳಪಡಿಸಿದ್ದು, ಪ್ರಸ್ತುತ ೮ ಲಕ್ಷ ರಾಸುಗಳಿಗೆ ಗುಂಪು ವಿಮೆಗೆ ಒಳಪಡಿಸಲಾಗಿದೆ ಎಂದು ಹೇಳಿದರು.
ತಾವು ಅಧಿಕಾರವಹಿಸಿಕೊಂಡ ಕೆಲವೇ ದಿನಗಳಲ್ಲಿ ಕೋವಿಡ್ ಅಲೆ ಪ್ರಾರಂಭವಾಯಿತು. ದೇಶವ್ಯಾಪಿ ಲಾಕ್‌ಡೌನ್ ಆಗಿದ್ದರಿಂದ ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಹಾಲು ಉತ್ಪಾದಕರಿಗೆ ಶೇಖರಣಾ ದರವನ್ನು ಕಡಿಮೆ ಮಾಡದೇ ಮತ್ತು ರಜಾ ಘೋಷಿಸದೇ ಉತ್ಪಾದಿಸಿದ ಎಲ್ಲ ಹಾಲನ್ನು ಉತ್ಪಾದಕರಿಂದ ಖರೀದಿ ಮಾಡಲಾಗಿದೆ. ಹೈನು ರಾಸುಗಳಲ್ಲಿ ಕಾಣ ಸಿಕೊಳ್ಳುವ ಕೆಚ್ಚಲು ಬಾವು ರೋಗವನ್ನು ತಡೆಗಟ್ಟಿ ಗುಣಮಟ್ಟದ ಹಾಲು ಶೇಖರಣೆ ಮತ್ತು ಇದರ ರೋಗ ನಿಯಂತ್ರಣಕ್ಕಾಗಿ ಆದ್ಯತೆ ನೀಡಲಾಗಿದೆ. ಈ ಅವಧಿಯಲ್ಲಿ ೬೨ ಲಕ್ಷ ಅಂದರೆ ಶೇ ೫೦ ರಷ್ಟು ಅನುದಾನವನ್ನು ಒಕ್ಕೂಟಗಳಿಗೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ರೋಗ ನಿಯಂತ್ರಣಕ್ಕೆ ೨೦೦ ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಹೇಳಿದರು.
ಪ್ರಥಮ ಬಾರಿಗೆ ಬಲ್ಕ್‌ಮಿಲ್ಕ್ ಕೂಲರ್ ಡೇಟಾ ಲಾಗರ್ ಕಿಟ್‌ನ್ನು ಕಹಾಮ ವ್ಯಾಪ್ತಿಯ ಹಾಲು ಒಕ್ಕೂಟಗಳ ಸಂಘಗಳಲ್ಲಿ ಅಳವಡಿಸಲಾಗಿದ್ದು, ಇದಕ್ಕೆ ಸಂಸ್ಥೆಯ ವತಿಯಿಂದ ಶೇ ೨೫ ರಷ್ಟು ಅನುದಾನ ನೀಡಲಾಗುತ್ತಿದೆ. ಇದರಿಂದ ಬಿಎಂಸಿ ನಿರ್ವಹಣೆಯ ಶುದ್ಧ ಹಾಲು ಉತ್ಪಾದನೆಗೆ ಅನುಕೂಲವಾಗಿದೆ. ಪಶು ಆಹಾರ ರಿಯಾಯತಿ ದರಕ್ಕೆ ಸಂಬಂಧಿಸಿದಂತೆ ಎರಡು ವರ್ಷದಲ್ಲಿ ಅಂದಾಜು ೫೦೦ ರಿಂದ ೨೦೦೦ ರೂ. ವರೆಗೆ ವಿವಿಧ ಸಂದರ್ಭಗಳಲ್ಲಿ ಪ್ರತಿ ಮೆಟ್ರಿಕ್ ಟನ್‌ಗೆ ರಿಯಾಯತಿ ನೀಡಲಾಗಿದೆ. ಪಶು ಆಹಾರವನ್ನು ಎರಡು ವರ್ಷಗಳಲ್ಲಿ ೧೪ ಜಿಲ್ಲಾ ಹಾಲು ಒಕ್ಕೂಟಗಳಿಗೆ ಅವಶ್ಯವಿರುವ ಪಶು ಆಹಾರವನ್ನು ೫೫ ರಿಂದ ೬೩ ಸಾವಿರ ಮೆಟ್ರಿಕ್ ಟನ್ ಪಶು ಆಹಾರ ಉತ್ಪಾದಿಸಿ ಉತ್ಪಾದಕರ ಬೇಡಿಕೆ ಅನುಸಾರ ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೊಸದಾಗಿ ಮಂಡ್ಯ, ಅರಕಲಗೂಡು ಹಾಗೂ ಸಾದಲಿಯಲ್ಲಿ ಪಶು ಆಹಾರ ಘಟಕಗಳನ್ನು ನಿರ್ಮಿಸುವ ಉದ್ಧೇಶ ಹೊಂದಲಾಗಿದೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲೂ ಹಾಲಿನ ಮಾರಾಟವನ್ನು ಅತ್ಯಂತ ಜಾಗೃತಿಯಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯದಂತೆ ಕರ್ತವ್ಯ ನಿರ್ವಹಿಸಲಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಹಲವು ಅಡತಡೆಗಳನ್ನು ಮೀರಿ ಈ ಹಿಂದಿನ ಮಾರಾಟವನ್ನು ಮೊದಲಿನಂತೆ ಮರಳಿ ಪಡೆಯಲಾಗಿದೆ. ಹೊರ ರಾಜ್ಯಗಳಲ್ಲಿ ಮಾರಾಟವನ್ನು ವಿಸ್ತರಿಸಲಾಗಿದ್ದು, ಪ್ರಮುಖ ವಾಣಿಜ್ಯ ನಗರಗಳಾದ ಮುಂಬಯಿ, ಪುಣೆ, ಗೋವಾ, ಹೈದ್ರಾಬಾದ್‌ಗಳಲ್ಲಿ ಹಾಲು ಮಾರಾಟದ ಬಲವರ್ಧನೆಗೊಳಿಸಲಾಗಿದೆ. ಇತ್ತೀಚೆಗೆ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯ (ನಾಗಪುರ್) ನಂದಿನಿ ಚಿಲ್ಲರೆ ಮಾರಾಟ ಜಾಲವನ್ನು ವಿಸ್ತರಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ಸಹ ದೇಶವಲ್ಲದೇ ಜಾಗತಿಕವಾಗಿಯೂ ನಂದಿನಿ ಉತ್ಪನ್ನಗಳ ಮಾರಾಟ ಜಾಲಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಅವರು ತಿಳಿಸಿದರು.
ಹಾಲು ಮಾರಾಟಗಾರರು ಮತ್ತು ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಮಾರಾಟಗಾರರಿಗೆ ಲಾಭಾಂಶ ಹೆಚ್ಚಳ ಮಾಡಲಾಗಿದೆ. ಗ್ರಾಹಕರಿಗೆ ಪ್ರತಿ ಲೀಟರ್ ಹಾಲಿನೊಂದಿಗೆ ೪೦ ಎಂಎಲ್ ಉಚಿತ ಹಾಲನ್ನು ನೀಡಲಾಗಿದೆ. ಹಾಲು, ಮೊಸರು ಅಲ್ಲದೇ ನಂದಿನಿ ಬ್ರಾಂಡ್‌ನ ಇತರೇ ಸಿಹಿ ಉತ್ಪನ್ನಗಳನ್ನು, ಇತರೇ ಉಪ ಉತ್ಪನ್ನಗಳ ಮಾರಾಟವನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯಾಧ್ಯಂತ ೧೫೦ ಹೊಸ ನಂದಿನಿ ಪಾರ್ಲರ್‌ಗಳನ್ನು ತೆರೆಯಲಾಗಿದ್ದು, ಹೊಸ ಕಲ್ಪನೆಗಳನ್ನು ನೀಡಲಾಗಿದೆ. ನಂದಿನಿ ಕೆಫೆ ಮೂ ಎಂಬ ಆಧುನಿಕ ಶೈಲಿಯ ಪಾರ್ಲರ್‌ಗಳನ್ನು ಸಹ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ೫೦೦೦ ಹೊಸ ನಂದಿನಿ ಮಳಿಗೆಗಳು ಮತ್ತು ೧೦೦ ಕೆಫೆ ಮೂ ಮಳಿಗೆಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ೪೦ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗಳಿಗೆ ಪರಿಚಯಿಸಲಾಗಿದೆ. ಇದರಲ್ಲಿ ಬ್ರೆಡ್ ಸಹ ಒಳಗೊಂಡಿದೆ. ಈಗಾಗಲೇ ಹೊರ ದೇಶಗಳಿಗೆ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಲೇಶಿಯಾ, ನಾನ್ ಯುರೋಪಿಯನ್ ರಾಷ್ಟ್ರಗಳಲ್ಲಿ ನಂದಿನಿ ಸಿಹಿ ಉತ್ಪನ್ನಗಳನ್ನು ರಫ್ತು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಶೀಘ್ರದಲ್ಲಿ ಬೆಳಗಾವಿಯಲ್ಲಿ ಎನ್‌ಎಂಪಿ ಪ್ಲಾಂಟ್‌ನ್ನು ತೆರೆಯುವ ಉದ್ಧೇಶ ಹೊಂದಲಾಗಿದ್ದು, ಆಡಳಿತ ಮಂಡಳಿ, ರೈತರು, ಗ್ರಾಹಕರು ಹಾಗೂ ನೌಕರರ ಸಹಕಾರದೊಂದಿಗೆ ಕೆಎಂಎಫ್ ಬಲವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೆಎಂಎಫ್ ನಂದಿನಿ ಬ್ರಾಂಡ್‌ನ್ನು ಜಾಗತೀಕವಾಗಿ ಗುರುತಿಸಲು ಯೋಜನೆಗಳನ್ನು ರೂಪಿಸಿರುವುದಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ನಿರ್ದೇಶಕರು, ಜಿಲ್ಲಾ ಹಾಲು ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರು, ಕೆಎಂಎಫ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೆಎಂಎಫ್ ಎಂಡಿ ಬಿ.ಸಿ. ಸತೀಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಎನ್. ಹೆಗಡೆ ಸ್ವಾಗತಿಸಿದರು. ಎಂ.ಟಿ. ಕುಲಕರ್ಣಿ ವಂದಿಸಿದರು. ರಘುನಂದನ್ ಕಾರ್ಯಕ್ರಮ ನಿರೂಪಿಸಿದರು.
ಲೋಳಸೂರ ಸೇತುವೆಗೆ ಚಾಲನೆ; ಸಂಚಾರ ಪುನರಾರಂಭ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button