
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಮಳೆ ಅಬ್ಬರ, ಕೊರೊನಾ ಮೂರನೇ ಅಲೆ ಭೀತಿ ನಡುವೆ ಇದೀಗ ಡೆಂಘ್ಯೂ ಹಾಗೂ ಚಿಕೂನ್ ಗುನ್ಯಾ ಪ್ರಕರಣಗಳು ಹೆಚ್ಚುತ್ತಿವೆ.
ಒಂದೇ ವಾರದಲ್ಲಿ ರಾಜ್ಯದಲ್ಲಿ 293 ಜನರಲ್ಲಿ ಡೆಂಘಿ ಸೋಂಕು ಪತ್ತೆಯಾಗಿದ್ದು, ಮಕ್ಕಳಿಂದ ಹಿಡಿದು ವೃದ್ಧರವರೆಗೂ ಜ್ವರದಿಂದ ಬಳಲುತ್ತಿದ್ದಾರೆ. ಈವರೆಗೆ ರಾಜ್ಯದಲ್ಲಿ 3,572 ಡೆಂಘಿ ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ರಾಜಧಾನಿ ಬೆಂಗಳೂರಿನಲ್ಲಿ 540, ಕಲಬುರ್ಗಿಯಲ್ಲಿ 321, ಉಡುಪಿ 312, ಶಿವಮೊಗ್ಗ 260, ದಕ್ಷಿಣ ಕನ್ನಡ 192, ಕೊಪ್ಪಳ 175 ಜನರು ಡೆಂಘಿಯಿಂದ ಬಳಲುತ್ತಿದ್ದಾರೆ.
ಇನ್ನೊಂದೆಡೆ ಚಿಕೂನ್ ಗುನ್ಯಾ ಕೇಸ್ ಕೂಡ ಹೆಚ್ಚುತ್ತಿದ್ದು, ಈವರೆಗೆ 1,187 ಜನರಲ್ಲಿ ಚಿಕೂನ್ ಗೂನ್ಯಾ ದೃಢಪಟ್ಟಿದೆ.
ಮಳೆಯ ಅಬ್ಬರ ಹೆಚ್ಚಾಗಿರುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚುತ್ತಿದೆ. ಪ್ರಮುಖವಾಗಿ ಈಡೀಸ್ ಸೊಳ್ಳೆ ಬಗ್ಗೆ ಎಚ್ಚರಿಕೆವಹಿಸುವ ಅಗತ್ಯವಿದೆ. ಮನೆ ಸುತ್ತಮುತ್ತ ಚರಂಡಿ ನೀರು ನಿಲ್ಲದಂತೆ, ಮನೆಗಳಲ್ಲಿ ಅನಗತ್ಯವಾಗಿ ನೀರು ಸೇಖರಿಸಿಟ್ಟುಕೊಳ್ಳದಂತೆ ನೋಡಿಕೊಳ್ಳಬೇಕು. ಸ್ವಚ್ಚತೆ ಬಗ್ಗೆ ಹೆಚ್ಚು ಮುಂಜಾಗೃತೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.