Kannada NewsKarnataka NewsLatest

ಕುತೂಹಲ ಮೂಡಿಸಿದ ರಮೇಶ್ ಜಾರಕಿಹೊಳಿ 2 ಹೇಳಿಕೆಗಳು: ಅಭಿಮಾನಿಗಳಲ್ಲಿ ಖಾತರ

ಪ್ರಗತಿವಾಹಿನಿ ಸುದ್ದಿ, ಅಥಣಿ – ಬೆಳಗಾವಿ ವಿಧಾನ ಪರಿಷತ್ ಚುನಾವಣೆ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಇನ್ನು ಒಂದು ವಾರ ಮಾತ್ರ ಪ್ರಚಾರಕ್ಕೆ ಅವಕಾಶವಿದ್ದು, ಜಿದ್ದಾ ಜಿದ್ದಿನ ಕಣ ಸದ್ದು ಮಾಡುತ್ತಿದೆ.

ಈ ಮಧ್ಯೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಹೇಳಿಕೆಗಳು ಅವರ ಅಭಿಮಾನಿಗಳು ಖಾತರದಿಂದ ಕಾಯುವಂತೆ ಮಾಡಿದೆ. ಒಂದೆಡೆ ಲಖನ್ ಸ್ಪರ್ಧೆ ಅವರ ವಯಕ್ತಿಕ ಎನ್ನುತ್ತಿರುವ ರಮೇಶ ಜಾರಕಿಹೊಳಿ ಇನ್ನೊಂದೆಡೆ ಕಾಂಗ್ರೆಸ್ ಸೋಲಿಸುವುದಕ್ಕಾಗಿಯೇ ಲಖನ್ ಕಣಕ್ಕಿಳಿಸಲಾಗಿದೆ ಎಂದು ನೇರವಾಗಿ ಹೇಳಿಕೆ ನೀಡುತ್ತಿದ್ದಾರೆ.

Home add -Advt

ಲಖನ್ ಜಾರಕಿಹೊಳಿಗೆ ಮೊದಲ ಇಲ್ಲವೇ ಎರಡನೇ ಪ್ರಾಶಸ್ತ್ಯದ ಮತ ಹಾಕಿಸುವ ಸಂಬಂಧ ದೆಹಲಿಗೆ ಹೋಗಿ ಹೈಕಮಾಂಡ್ ಒಪ್ಪಿಗೆ ಪಡೆಯುತ್ತೇನೆ ಎಂದು ತೆರಳಿದ್ದ ರಮೇಶ ಜಾರಕಿಹೊಳಿಗೆ ಈವರೆಗೂ ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಇನ್ನು 2 – 3 ದಿನದಲ್ಲಿ ಹೈಕಮಾಂಡ್ ಒಪ್ಪಿಗೆ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿ ಅವರಿದ್ದಾರೆ.

ಈ ಮಧ್ಯೆ, ಗುರುವಾರ ಅಥಣಿ ತಾಲೂಕಿನಲ್ಲಿ ಪ್ರವಾಸ ಮಾಡಿದ್ದ ರಮೇಶ್ ನೀಡುರುವ 2 ಹೇಳಿಕೆಗಳು ಅವರ ಅಭಿಮಾನಿಗಳು ಕುತೂಹಲದಿಂದ ಕಾಯುವಂತೆ ಮಾಡಿವೆ. ಮೊದಲನೆಯದಾಗಿ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರೆ ನಾನೇ ಮುಖ್ಯಮಂತ್ರಿಯಾದಂತೆ. ನನ್ನ -ಅವರ ನಡುವೆ ಅವಿನಾಭಾವ ಸಂಬಂಧವಿದೆ. ಇನ್ನು 10 ದಿನ ಕಾಯಿರಿ, ನಾನೂ ಮಂತ್ರಿಯಾಗುತ್ತೇನೆ ಎಂದು ಹೇಳಿದ್ದಾರೆ.

ಎರಡನೆಯದಾಗಿ, ಯಾವ ಪ್ರಾಶಸ್ತ್ಯದ ಮತವನ್ನು ಯಾರಿಗೆ ಹಾಕಬೇಕು ಎನ್ನುವುದನ್ನು ಇನ್ನೆರಡು ದಿನದಲ್ಲಿ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ರಮೇಶ್ ಜಾರಕಿಹೊಳಿ ಅವರು ಸಿಡಿ ಪ್ರಕರಣದಿಂದಾಗಿ ಸಚಿವಸ್ಥಾನ ಕಳೆದುಕೊಂಡಾಗಿನಿಂದ ಅವರು ಮರಳಿ ಸಚಿವರಾಗುವುದನ್ನು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಕೊನೆಯಪಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನಾದರೂ ಸಚಿವಸಂಪುಟಕ್ಕೆ ಸೇರಿಸಿಕೊಳ್ಳಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಈವರೆಗೂ ಅದು ಸಾಧ್ಯವಾಗಿರಲಿಲ್ಲ.

ಇದೀಗ, ಇನ್ನು 10 ದಿನದಲ್ಲಿ ಮಂತ್ರಿಯಾಗುವುದಾಗಿ ರಮೇಶ್ ನೀಡಿರುವ ಹೇಳಿಕೆ, ಇದರ ಬೆನ್ನಲ್ಲೇ, 10ನೇ ತಾರೀಖಿನ ನಂತರ ಸಚಿವಸಂಪುಟದಲ್ಲಿ ಹಲವು ಬದಲಾವಣೆಗಳಾಗಲಿವೆ ಎನ್ನುವ ಬಸನಗೌಡ ಪಾಟೀಲ ಯತ್ನಾಳ್ ಅವರ ಹೇಳಿಕೆ ಎಲ್ಲರಲ್ಲೂ ಕುತೂಹಲ ಮೂಡಿಸಿವೆ.

ದೆಹಲಿಗೆ ತೆರಳಿದ್ದಾಗ ಈ ಸಂಬಂಧ ಏನಾದರೂ ಬೆಳವಣಿಗೆ ನಡೆಯಿತೇ ಎನ್ನುವ ಪ್ರಶ್ನೆ ಅವರು ಅಭಿಮಾನಿಗಳಲ್ಲಿ ಮೂಡಿದೆ. ಹಾಗಾಗಿ ಇನ್ನು 15 ದಿನ ರಾಜ್ಯ ರಾಜಕೀಯದಲ್ಲಿ, ಅದರಲ್ಲೂ ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಇದೇ ವೇಳೆ ಅಧಿವೇಶನಕ್ಕಾಗಿ ಶಾಸಕರು, ಸಚಿವರು, ಮುಖ್ಯಮಂತ್ರಿಗಳು ಎಲ್ಲರೂ ಬೆಳಗಾವಿಯತ್ತ ಮುಖಮಾಡಿರುವುದರಿಂದ ಮತ್ತಷ್ಟು ಕುತೂಹಲಕಾರಿ ಬೆಳವಣಿಗೆಗಳಿಗೆ ಬೆಳಗಾವಿ ಸಾಕ್ಷಿಯಾಗಲಿದೆ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರೂ ನಾನೇ ಮುಖ್ಯಮಂತ್ರಿಯಾದಂತೆ – ರಮೇಶ ಜಾರಕಿಹೊಳಿ

Related Articles

Back to top button