ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿಕೆ: ಬೆಳಗಾವಿ ಬಿಜೆಪಿಗರಿಗೆ ಶಾಕ್!

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಭಿನ್ನಮತದಿಂದಾಗಿ ಕೋತ ಕೋತ ಕುದಿಯುತ್ತಿರುವ ಬೆಳಗಾವಿ ಬಿಜೆಪಿ ಘಟಕದಲ್ಲಿ ಭಿನ್ನಮತವೇ ಇಲ್ಲ ಎನ್ನುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಹೇಳಿಕೆ ಜಿಲ್ಲೆಯ ಎಲ್ಲ ನಾಯಕರಿಗೆ ಶಾಕ್ ಕೊಟ್ಟಿದೆ.
ಭಿನ್ನಮತ ಬುಗಿಲೆದ್ದು ಮುಖ್ಯಮಂತ್ರಿಗಳ ಅಂಗಳಕ್ಕೆ ಹೋದರೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ಇಲ್ಲವೇ? ಉಸ್ತುವಾರಿ ಸಚಿವರಾಗಿ ಜಿಲ್ಲೆಗೆ ಬಂದು ಭಿನ್ನಮತ ಸರಿಪಡಿಸುವ ಬದಲು ಬೆಂಗಳೂರಿನಲ್ಲಿ ಕುಳಿತು ಮಾತನಾಡುವುದು ಸರಿಯೇ ಎಂದು ಹೆಸರು ಹೇಳಲಿಚ್ಚಿಸದ ಬಿಜೆಪಿ ನಾಯಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ಸುಮ್ಮನೇ ಹೆಸರಿಗೆ ಜಿಲ್ಲಾ ಉಸ್ತುವಾರಿ ಸಚಿವಸ್ಥಾನ ಕೊಡುವ ಬದಲು ನಿಜವಾಗಿ ಕೆಲಸ ಮಾಡುವವರಿಗೆ ಕೊಡಬೇಕು. ಇದೇ ರೀತಿ ಮುಂದುವರಿದರೆ ಪಕ್ಷ ಜಿಲ್ಲೆಯಲ್ಲಿ ಇನ್ನಷ್ಟು ಅಧೋಗತಿಗೆ ಸರಿಯುತ್ತದೆ. ಜನರನ್ನು ಎದುರಿಸುವುದು ಕಷ್ಟವಾಗುತ್ತದೆ. ಈಗಲೇ ಮುಖ್ಯಮಂತ್ರಿಗಳು ಹಾಗೂ ರಾಜ್ಯಾಧ್ಯಕ್ಷರು ಎಚ್ಚೆತ್ತುಕೊಳ್ಳಬೇಕು. ಈಗಾಗಲೆ ಅವರಿಗೆ ಎಲ್ಲವನ್ನೂ ಗಮನಕ್ಕೆ ತರಲಾಗಿದೆ ಎಂದು ಅವರು ಪ್ರತಿವಾಹಿನಿಗೆ ತಿಳಿಸಿದರು.
ಕಾರಜೋಳ ಹೇಳಿದ್ದೇನು?
ಕಾಂಗ್ರೆಸ್ ಪಕ್ಷದಲ್ಲಿ ಮೂರು ಗುಂಪುಗಳಿವೆ. ಖರ್ಗೆ, ಪರಮೇಶ್ವರ್, ಶಾಮನೂರು ಶಿವಶಂಕರಪ್ಪ ಹಾಗೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹೀಗೆ ಮೂರು ಗುಂಪುಗಳಿವೆ. ಮೂರು ಗುಂಪುಗಳಲ್ಲಿ ಅವರಲ್ಲಿಯೇ ಒಡಕುಗಳಿವೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಕಾರಜೋಳ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಎಣ್ಣೆ ನೀರು ಇದ್ದಂತೆ ಅವರು ಎಂದಿಗೂ ಸೇರುವುದಿಲ್ಲ. ಪರಸ್ಪರ ಕಿತ್ತಾಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಮುಳುಗುವ ಹಡಗು, ಅಂತಹ ಪಕ್ಷಕ್ಕೆ ಬಿಜೆಪಿ ಶಾಸಕರು ಹೋಗಲ್ಲ. ಬಿಜೆಪಿಯಲ್ಲಿ ಮೂಲ-ವಲಸಿಗ ಎಂಬುದು ಇಲ್ಲ. ಒಮ್ಮೆ ಬಿಜೆಪಿಗೆ ಸೇರ್ಪಡೆಯಾದ ಮೇಲೆ ಅವರು ಬಿಜೆಪಿ ಸದಸ್ಯತ್ವ ಪಡೆಯುತ್ತಾರೆ. ಹೀಗಾಗಿ ಯಾವುದೇ ಅಸಮಾಧಾನಗಳು ನಮ್ಮಲ್ಲಿಲ್ಲ ಎಂದರು.
ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಟೀ ಕುಡಿಯಲು ಸೇರಿದರೂ ನೀವು ಭಿನ್ನಮತ ಸ್ಫೋಟ ಎಂದು ಬಿಂಬಿಸುತ್ತೀರಿ. ಭಿನ್ನಮತ ಇದೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ. ಕತ್ತಿಯವರ ಮನೆಯಲ್ಲಿ ರಮೇಶ್ ಜಾರಕಿಹೊಳಿಗೆ ಆಹ್ವಾನವಿಲ್ಲ ಅಂತೇನೂ ಇಲ್ಲ ಎಂದು ಹೇಳಿದ್ದಾರೆ.
ಮಹಿಳಾ ಕಾರ್ಯಕರ್ತೆ ಜತೆ ಮಾಜಿ ಸಂಸದರ ಮಾತು; ಎಲ್.ಆರ್.ಶಿವರಾಮೇಗೌಡ ಆಡಿಯೋ ವೈರಲ್


