Kannada NewsKarnataka NewsLatest
ಉಗಾರ ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ

ಪ್ರಗತಿವಾಹಿನಿ ಸುದ್ದಿ, ಕಾಗವಾಡ – ಕಾಗವಾಡ ತಾಲೂಕಿನ ಉಗಾರ ಸಕ್ಕರೆ ಕಾರ್ಖಾನೆಯಲ್ಲಿ ಮಂಗಳವಾರ ಆಕಸ್ಮಿಕವಾಗಿ ಬೆಂಕಿ ತಗುಲಿ ಅವಘಡ ಸಂಭವಿಸಿದೆ.
ಮಂಗಳವಾರ ಮಧ್ಯಾಹ್ನ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಸ್ಥಳದಲ್ಲಿಯೇ ಕನ್ವೇನಿಎಂಟ್ ಬೆಲ್ಟ್ ಗೆ ಅಗ್ನಿ ಸ್ಪರ್ಶವಾಗಿದೆ. ಇದರಿಂದ ಅದರ ಬಳಿಯಿರುವ ಇನ್ನುಳಿದ ಬೆಲ್ಟ್ ಗಳಿಗೆ ಅಗ್ನಿ ಸ್ಪರ್ಶವಾಗಿ ಲಕ್ಷಾಂತರ ಮೌಲ್ಯದ ಬೆಲ್ಟ್ ಗಳು ಅಗ್ನಿಗೆ ಆಹುತಿಯಾಗಿವೆ. ಕಾರ್ಖಾನೆಯ ಕಾರ್ಮಿಕರು ಮತ್ತು ಪರಿಸರದ ಸಕ್ಕರೆ ಕಾರ್ಖಾನೆಗಳ ಕಾರ್ಮಿಕರ ನೆರವಿನಿಂದ ಅಗ್ನಿ ನಂದಿಸಲಾಗಿದೆ.
ಸಕ್ಕರೆ ಕಾರ್ಖಾನೆಯ ಎಂ.ಡಿ ಚಂದನ್ ಶಿರಗಾಂವಕರ ಈ ಬಗ್ಗೆ ಮಾಹಿತಿ ನೀಡಿ, ಸಕ್ಕರೆ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ, ಆದರೆ ಕಾರ್ಖಾನೆ ಕಾರ್ಮಿಕರು ಜೀವದ ಹಂಗುತೊರೆದು ಪ್ರಯತ್ನಿಸಿ ಅಗ್ನಿ ನಂದಿಸಿದ್ದಾರೆ ಎಂದರು.
ನಾಳೆಯಿಂದ ಕಬ್ಬು ನುರಿಸುವುದು ಮುಂದುವರಿಕೆ :
ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಸ್ಥಳದಲ್ಲಿ ಎಲ್ಲ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು ನಾಳೆ ಮಧ್ಯಾಹ್ನದವರೆಗೆ ಮತ್ತೆ ಕಬ್ಬು ನುರಿಸುವ ಕಾರ್ಯ ಯಥಾಸ್ಥಿತಿಯಾಗಿ ಮುಂದುವರಿಯಲಿದೆ ಎಂದು ಹೇಳಿದರು.




