*ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ವದಂತಿ: ಬಿಗ್ ಬಿ ಅಮಿತಾಬ್ ಬಚ್ಚನ್ ಖಡಕ್ ತಿರುಗೇಟು*

ಪ್ರಗತಿವಾಹಿನಿ ಸುದ್ದಿ: ಅಮಿತಾಬ್ ಬಚ್ಚನ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಇದು ಅವರ ಕೋಟ್ಯಂತರ ಅಭಿಮಾನಿಗಳನ್ನು ಆತಂಕಕ್ಕೆ ತಳ್ಳಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಿ ಅವರ ಆರೋಗ್ಯದ ಬಗ್ಗೆ ನಾನಾ ವದಂತಿಗಳು ಹರಿದಾಡಲು ಆರಂಭ ಆಗಿದ್ದವು. ಅಮಿತಾಭ್ ಅವರು ಮೇ 16ರಿಂದಲೇ ಮುಂಬೈನ ನಾನಾವತಿ ಆಸ್ಪತ್ರೆಯ ವಿಐಪಿ ವಿಭಾಗದಲ್ಲಿ ದಾಖಲಾಗಿದ್ದಾರೆ ಮತ್ತು ಅವರಿಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವರದಿಯಾಗಿತ್ತು. ಈ ಎಲ್ಲಾ ಸುದ್ದಿಗಳ ಬೆನ್ನಲ್ಲೇ ಈ ಬಗ್ಗೆ ಆಸ್ಪತ್ರ್ತೆ ಮೂಲಗಳು ಸ್ಪಷ್ಟನೆ ನೀಡಿವೆ.
ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿಲ್ಲ. ಅವರು ಪ್ರತಿ ತಿಂಗಳು ಹೋಗುವಂತೆ ಶನಿವಾರದಂದು ನಾನಾವತಿ ಆಸ್ಪತ್ರೆಗೆ ಸಾಮಾನ್ಯ ಹೆಲ್ತ್ ಚೆಕಪ್ಗಾಗಿ ಹೋಗಿದ್ದರು. ತಪಾಸಣೆ ಮುಗಿದ ತಕ್ಷಣವೇ ಅವರು ಮನೆಗೆ ಮರಳಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಮರುದಿನವೇ ಅಮಿತಾಭ್ ಬಚ್ಚನ್ ಅವರು ತಮ್ಮ ನಿವಾಸ ಜಲ್ಸಾದಿಂದ ತಮ್ಮ ಕಚೇರಿಗೆ ತಾವೇ ಸ್ವತಃ ಕಾರು ಚಲಾಯಿಸಿಕೊಂಡು ಹೋಗಿರುವುದನ್ನು ಜನರು ನೋಡಿದ್ದಾರೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದು ಬಚ್ಚನ್ ಕುಟುಂಬದ ಆಪ್ತರು ಖಚಿತಪಡಿಸಿದೆ.
ವದಂತಿಗಳ ನಡುವೆಯೇ ಅಮಿತಾಭ್ ಬಚ್ಚನ್ ಅವರು ತಮ್ಮ ಬ್ಲಾಗ್ನಲ್ಲಿ ಹಂಚಿಕೊಂಡಿರುವ ಸಾಲುಗಳು ಸುಳ್ಳು ಸುದ್ದಿ ಹರಡುವವರಿಗೆ ಖಡಕ್ ಉತ್ತರ ನೀಡಿದೆ. ‘ಹದ್ದುಗಳು ಶಾಂತವಾದಾಗ ಗಿಳಿಗಳು ಮಾತನಾಡಲು ಶುರು ಮಾಡುತ್ತವೆ… ನಾನು ರೊಟ್ಟಿ ಹಾಗೂ ಸೊಪ್ಪಿನ ಪಲ್ಯ ತಿಂದೆ. ಅಷ್ಟರಲ್ಲೇ ಕಾಗೆಗಳು ಕೂಗಲು ಆರಂಭಿಸಿದವು’ ಎಂದು ಬರೆದುಕೊಂಡಿದ್ದಾರೆ.


