Politics

*ಕರ್ನಾಟಕ ಬಿಹಾರದಂತಾಗಿದೆ; ರಾಜ್ಯದ ಜನರನ್ನು ಭಗವಂತನೇ ಕಾಪಾಡಬೇಕು ಎಂದ ಬಿ.ವೈ.ವಿಜಯೇಂದ್ರ*

ಪ್ರಗತಿವಾಹಿನಿ ಸುದ್ದಿ: ಚನ್ನಗಿರಿಯಲ್ಲಿ ಪೊಲೀಸ್ ವಶದಲ್ಲಿದ್ದ ಆರೋಪಿ ಆದಿಲ್ ಸಾವು ಪ್ರಕರಣ ರಾಜಕೀಯ ನಾಯಕರ ವಾಕ್ಸಮರಕ್ಕೆ ಅಸ್ತ್ರ ಸಿಕ್ಕಂತಾಗಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್ ನಾಯಕರು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಬಿಹಾರದಂತಾಗಿದೆ ರಾಜ್ಯದ ಜನರನ್ನು ದೇವರೇ ಕಾಪಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚನ್ನಗಿರಿ ಪ್ರಕರಣದ ಬಗ್ಗೆ ಚಿತ್ರದುರ್ಗದಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಠಾಣೆಗೆ ನುಗ್ಗಿ ಹೊಡೆಯುತ್ತಾರೆ ಎಂದರೆ ಸರ್ಕಾರ ಇದೆಯಾ? ಪೊಲೀಸರೇ ಪೊಲೀಸರನ್ನು ರಕ್ಷಿಸಿಕೊಳ್ಳಬೇಕಾದ ದುಸ್ಥಿತಿ. ಪೊಲೀಸ್ ವ್ಯವಸ್ಥೆ ಬಗ್ಗೆ ಯಾರಿಗೂ ಭಯವಿಲ್ಲದಂತಾಗಿದೆ ಎಂದಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಕೇಸ್ ನಡೆಯಿತು. ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ದಾಂಧಲೆ ಮಾಡಿದ್ದರು. ಈಗ ಠಾಣೆಗೆ ನುಗ್ಗಿ ಕಲ್ಲು ತೂರಾಟ ನಡೆಸಿದ್ದಾರೆ. ಸರ್ಕಾರ, ಸಚಿವರು ಇದ್ದಾರೆ ಎಂಬುದನ್ನು ಜನರು ಮರೆತಂತಿದೆ. ರಾಜ್ಯ ಲಾಲು ಪ್ರಸಾದ್ ಆಡಳಿತದ ಬಿಹಾರದಂತಾಗಿದೆ. ಇಲ್ಲಿನ ಜನರನ್ನು ಆ ಭಗವಂತನೇ ಕಾಪಾಡಬೇಕು ಎಂದು ಕಿಡಿಕಾರಿದ್ದಾರೆ.

ಸಿಎಂ, ಡಿಸಿಎಂ ಅವರನ್ನು ಕೇಳಿದರೆ ದಾಳಿ ಮಾಡಿದವರು ಅಮಾಯಕರು ಅಂತಾರೆ. ಠಾಣೆ ಮೇಲೆ ದಾಳಿ ಮಾಡಿದವರೆಲ್ಲ ಅಮಾಯಕರಾ? ಅಮಾಯಕರು ಎಂದು ಅಲ್ಪಸಂಖ್ಯಾತರ ತುಷ್ಟೀಕರಣ ನಡೆದಿದೆ. ಚನ್ನಗಿರಿ ಲಾಕಪ್ ಡೆತ್ ಪ್ರಕರಣದ ಬಗ್ಗೆ ಸ್ಪಷ್ಟ ಮಾಹಿತಿ ಹೊರಬರಬೇಕಿದೆ ಎಂದು ಗುಡುಗಿದ್ದಾರೆ.

Related Articles

Back to top button