*ಕೆರೆಯಲ್ಲಿ ತಾಯಿ ಹಾಗೂ 5 ಮಕ್ಕಳ ಶವ ಪತ್ತೆ ಪ್ರಕರಣ: ಸಾವಿಗೆ ಕಾರಣ ಬಹಿರಂಗ*

ಪ್ರಗತಿವಾಹಿನಿ ಸುದ್ದಿ: ವಿಜಯಪುರ ನಗರದ ಹೊರವಲಯದ ಭೂತನಾಳ ಕೆರೆಯಲ್ಲಿ ತಾಯಿ ಹಾಗೂ ಐವರು ಮಕ್ಕಳ ಮೃತದೇಹಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿಗೆ ಅಸಲಿ ಕಾರಣ ಬಹಿರಂಗ ಆಗಿದೆ.
ಶೋಭಾ ಜಾಲಗೇರಿ (45) ತಾಯಿ, ವಿದ್ಯಾ (16), ಸುವರ್ಣ (14), ಗೌಡೇಶ್ (ಮೂಗ) (10), ವಿಕಾಸ (5) ಸಾನಿಕಾ (7) ಮೃತ ದುರ್ದೈವಿಗಳು.
ತಾಯಿ ಹಾಗೂ ಐವರು ಮಕ್ಕಳ ಶವ ಪತ್ತೆಯಾದ ಪ್ರಕರಣಕ್ಕೆ ಕೌಟುಂಬಿಕ ಕಲಹವೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಪತಿ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿವೆ.
ಅ. 23 ರಂದು ಗಂಡ ಮಲಕಾರಿ ಜೊತೆ ಶೋಭಾ ಜಗಳವಾಗಿತ್ತು. ನಂತರ ಆತ್ಮಹತ್ಯೆ ಮಾಡಿಕೊಳ್ಳೊದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಇದಾದ ನಂತರ ಅ. 24 ರಂದು ಗ್ರಾಮೀಣ ಪೊಲಿಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಇದಾದ ನಂತರ ಇಂದು ಭೂತನಾಳ ಕೆರೆಯಲ್ಲಿ 6 ಜನರ ಶವ ಪತ್ತೆಯಾಗಿತ್ತು.
ಮಲಕಾರಿ ಮದ್ಯಪಾನ ಮಾಡಿ ಶೋಭಾ ಮೇಲೆ ಹಲ್ಲೆ ನಡೆಸುತ್ತಿದ್ದ ಹಾಗೂ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಶೋಭಾ ಅವರ ಕುಟುಂಬಸ್ಥರು ಪತಿ ಮಲಕಾರಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸಂಪೂರ್ಣ ತನಿಖೆ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ. ನಿಂಬರಗಿ ತಿಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಲ್ಲಾ ರೀತಿಯಲ್ಲೂ ತನಿಖೆ ನಡೆಸುತ್ತಿದ್ದಾರೆ.



