Belagavi NewsBelgaum NewsKannada NewsKarnataka NewsLatest

*61ನೇ ವಧುವರ ಸಮಾವೇಶ ಉದ್ಘಾಟಿಸಿದ ಡಾ.ಪ್ರಭಾಕರ ಕೋರೆ*

ಅಖಿಲ ಭಾರತ ವೀರಶೈವ ಮಹಾಸಭೆ ಬೆಳಗಾವಿ ಜಿಲ್ಲಾ ಘಟಕ ಆಯೋಜನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವೀರಶೈವ ಲಿಂಗಾಯತ ಸಮಾಜದಲ್ಲಿ ಅನೇಕ ಒಳಪಂಗಡಗಳಿಂದ ಸಮಾಜವು ಒಡೆಯುತ್ತಿದೆ. ಒಳಪಂಗಡಗಳನ್ನು ಬಿಟ್ಟು ವೈವಾಹಿಕ ಸಂಬಂಧಗಳನ್ನು ಬೆಸೆದರೆ ಬೃಹತ್ ಸಮಾಜವು ಸಂಘಟನೆಗೊಳ್ಳಲು ಸಾಧ್ಯ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಹೇಳಿದರು.
ಅವರು ಬೆಳಗಾವಿಯ ಜೆಎನ್‌ಎಂಸಿ ಡಾ.ಬಿ.ಎಸ್.ಜೀರಗೆ ಸಭಾಂಗಣದಲ್ಲಿ ಮಹಾಸಭೆಯ ವಧುವರ ಅನ್ವೇಷಣ ಕೇಂದ್ರವು ಆಯೋಜಿಸಿದ್ದ 61ನೇ ವಧುವರರ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.

Home add -Advt

ಲಿಂಗಾಯತ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಪ್ರಬಲವಾಗಬೇಕಾದರೆ ಒಳಪಂಗಡಗಳನ್ನು ತೊರೆದು ವೀರಶೈವ ಲಿಂಗಾಯತ ಸಮಾಜ ಒಂದೆಂದು ತಿಳಿದರೆ ಮಾತ್ರ ಸಂಘಟನೆ ಸಾಧ್ಯ. ಈಗ ಸರ್ಕಾರವು ಸಮಾಜವನ್ನು ಒಡೆಯುವ ಕೆಲಸವನ್ನು ಮಾಡಿದೆ. ಕರ್ನಾಟಕದಲ್ಲಿ ಬೃಹತ್ ಸಂಖ್ಯೆಯಲ್ಲಿರುವ ನಾವು ಅಲ್ಪಸಂಖ್ಯಾತರಾಗುವುದರಲ್ಲಿ ಸಂದೇಹವಿಲ್ಲ ಎಂದರು.

ಒಳಪಂಗಡಗಳನ್ನು ಬಿಟ್ಟು ವೈವಾಹಿಕ ಸಂಬಂಧಗಳು ಏರ್ಪಡಿಸುವುದು ಭವಿಷ್ಯದ ದೃಷ್ಟಿಯಿಂದ ಉಚಿತವಾದುದು ಎಂಬುದನ್ನು ನಾವೆಲ್ಲ ಗಂಭೀರವಾಗಿ ವಿಚಾರಿಸಬೇಕು. ಒಂದೇ ವೇದಿಕೆಯ ಮೇಲೆ ತಮ್ಮ ಜೀವನ ಸಂಗಾತಿಯನ್ನು ತಮ್ಮ ಪಾಲಕರ ಸಹಾಯದಿಂದ ಸ್ವತಃ ಆಯ್ಕೆ ಮಾಡಿಕೊಳ್ಳುವ ಸದುದ್ದೇಶದಿಂದ ವೀರಶೈವ ಲಿಂಗಾಯತ ವಧುವರ ಅನ್ವೇಷಣ ಕೇಂದ್ರವು ಕೆಎಲ್‌ಇ ಸಂಸ್ಥೆಯೊಂದಿಗೆ 1988ರಿಂದ ಕಾರ್ಯವನ್ನು ನಿರ್ವಹಿಸುತ್ತಿದೆ.
ಒಂದಿಲ್ಲೊಂದು ಕೆಲಸದಲ್ಲಿ ನಿರತರಾಗಿರುವ ಲಿಂಗಾಯತ ಸಮುದಾಯದ ಒಳಪಂಗಡಗಳ ವಧು ವರರಿಗೆ, ಪಾಲಕರಿಗೆ ಬೇರೆ ಬೇರೆ ಊರು ಕೇರಿಗಳಿಗೆ ಹೋಗಿ  ವಧು ವರರನ್ನು ಭೇಟಿ ಮಾಡುವದು ಕಷ್ಟವಾಗುತ್ತಿರುವದರಿಂದ ಒಂದೇ ವೇದಿಕೆಯ ಮೇಲೆ  ಹಲವಾರು ವಧು ವರರನ್ನು ನೋಡಿ ವೈವಾಹಿಕ ಸಂಬಂಧಗಳು ಕುದುರುವುದಕ್ಕೆ ಅವಕಾಶ ಕಲ್ಪಿಸಿಕೊಡಲು  ಇಂತಹ ಸಮಾವೇಶಗಳನ್ನು ಮಹಾಸಭೆಯು ಏರ್ಪಡಿಸುತ್ತಿದೆ ಎಂದರು. ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ ವಧುವರ ಅನ್ವೇಷಣ ಕೇಂದ್ರವನ್ನು ಮಹಾಸಭೆಯು ಪ್ರಾರಂಭಿಸಲಿದ್ದು ಎನ್‌ಆರ್‌ಐಗೆ ಅನುಕೂಲ ಮಾಡಿಕೊಡಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷೆ ಶ್ರೀಮತಿ ರತ್ನಪ್ರಭಾ ಬೆಲ್ಲದ, ವಧುವರ ಅನ್ವೇಷಣ ಕೇಂದ್ರದ ಅಧ್ಯಕ್ಷರಾದ ಡಾ.ಎಫ್.ವ್ಹಿ.ಮಾನ್ವಿ, ಕಾರ್ಯದರ್ಶಿಗಳಾಗಿರುವ ಡಾ.ಗುರುದೇವಿ ಹುಲೆಪ್ಪನವರಮಠ ಈ ಸಂದರ್ಭದಲ್ಲಿ ಮಾತನಾಡಿದರು. ಶ್ರೀ ಪ್ರಕಾಶ ಬಾಳೇಕುಂದ್ರಿ, ಜ್ಯೋತಿ ಬದಾಮಿ, ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಡಾ.ಭಾರತಿ ಮಠದ, ಸವದಿ, ಪ್ರೊ.ನೇರ್ಲಿ ನಿರೂಪಿಸಿದರು. ಆಶಾ ಯಮಕನಮರಡಿ ಪ್ರಾರ್ಥಿಸಿದರು.

Related Articles

Back to top button