*ಮೃತ ನೇಹಾ ಹಿರೇಮಠ ಹೆಸರಲ್ಲಿ ಬಿಜೆಪಿ ರಾಜಕೀಯ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ*

ಸರಕಾರ ಈಗಾಗಲೆ ಸಿಐಡಿ ತನಿಖೆ, ವಿಶೇಷ ನ್ಯಾಯಾಲಯ ಸ್ಥಾಪನೆ ನಿರ್ಧಾರ ತೆಗೆದುಕೊಂಡಿದೆ
ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ: ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ವಿಷಯದಲ್ಲಿ ಬಿಜೆಪಿ ಅನಾವಶ್ಯಕವಾಗಿ ರಾಜಕೀಯ ಮಾಡುತ್ತಿದೆ. ನಮ್ಮ ಸಮಾಜದ ಹೆಣ್ಣು ಮಗಳನ್ನು ಕಳೆದುಕೊಂಡ ದುಃಖ ನನಗೂ ಇದೆ. ಈಗಾಗಲೆ ಸರಕಾರ ಸಿಐಡಿ ತನಿಖೆಗೆ ಒಪ್ಪಿಸಿದೆ, ವಿಶೇಷ ನ್ಯಾಯಾಲಯ ಸ್ಥಾಪನೆ ನಿರ್ಧಾರ ತೆಗೆದುಕೊಂಡಿದೆ. ಆರೋಪಿಗೆ ಕಠಿಣ ಶಿಕ್ಷೆ ಆಗೋದು ಗ್ಯಾರಂಟಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೈಲಹೊಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿರೇಬುದನೂರ, ತಡಸಲೂರ, ಹಾರುಗೊಪ್ಪ ಹಾಗೂ ಮರಕುಂಬಿ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಸಚಿವರು ಪ್ರಚಾರ ಕೈಗೊಂಡರು. ನೇಹಾ ಪಾಟೀಲ್ ಪ್ರಕರಣವನ್ನು ರಾಜ್ಯ ಸರ್ಕಾರ ಈಗಾಗಲೇ ಸಿಐಡಿಗೆ ವಹಿಸಿದೆ. ತನಿಖೆ ವಿಳಂಬವಾಗಬಾರದೆನ್ನುವ ಕಾರಣಕ್ಕೆ ವಿಶೇಷ ನ್ಯಾಯಾಲಯ ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗಿದೆ ಎಂದರು.

ದೇಶ ಕಟ್ಟಿದ್ದು ಕಾಂಗ್ರೆಸ್ ಪಕ್ಷ
ಕಳೆದ 10 ವರ್ಷಗಳಿಂದಷ್ಟೇ ದೇಶ ನಡೆಯುತ್ತಿದೆ ಎನ್ನುವ ಭ್ರಮೆಯನ್ನು ಬಿಜೆಪಿಹುಟ್ಟಿಸುತ್ತಿದೆ. ಸ್ವಾತಂತ್ರ್ಯದ ಬಳಿಕ ದೇಶ ಕಟ್ಟಿದ್ದು ಕಾಂಗ್ರೆಸ್ ಪಕ್ಷ. ದೇಶದಲ್ಲಿದ್ದ 502 ರಾಜ ಸಂಸ್ಥಾನಗಳನ್ನು ಒಗ್ಗೂಡಿಸುವುದೇ ದೊಡ್ಡ ಕೆಲಸವಾಯಿತು. ದೇಶದಲ್ಲಿ ಸೂಜಿ ತಯಾರಿಸಲೂ ಆಗದ ಪರಿಸ್ಥಿತಿ ಇತ್ತು. ಒಂದು ಹೊತ್ತು ಊಟಕ್ಕೂ ಪರದಾಡಬೇಕಿತ್ತು. ಇಂಥ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಿದ್ದು ಕಾಂಗ್ರೆಸ್ ಪಕ್ಷ ಎಂದು ಸಚಿವರು ಹೇಳಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಷ್ಟೇ ಪುರುಷರಿಗೂ ಅನುಕೂಲವಾಗಿದೆ. ಉಚಿತ ಕರೆಂಟ್, ಗೃಹಲಕ್ಷ್ಮಿ ಹಣಗಳಿಂದ ಪುರುಷರಿಗೂ ಅನುಕೂಲ. ಮನೆಯ ಖರ್ಚು ವೆಚ್ಚವನ್ನು ಮಹಿಳೆಯರೇ ನಿಭಾಯಿಸುತ್ತಿದ್ದಾರೆ. ಬೆಳಗಾವಿಯ ಕಷ್ಟ ಸುಖಗಳು ಬಿಜೆಪಿ ಅಭ್ಯರ್ಥಿಗೆ ಗೊತ್ತಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಗೆದ್ದರೆ, ಶಾಸಕ ಮಹಾಂತೇಶ್ ಕೌಜಲಗಿ ಅವರ ಮಾರ್ಗದರ್ಶನದಲ್ಲಿ ಬೈಲಹೊಂಗಲ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿದ್ದಾನೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಶಾಸಕ ಮಹಾಂತೇಶ್ ಕೌಜಲಗಿ, ನುಡಿದಂತೆ ನಡೆದ ಪಕ್ಷ ಕಾಂಗ್ರೆಸ್, ಕೇಂದ್ರ ಸರ್ಕಾರದ ನೀತಿ ವಿರುದ್ಧ ಹೋರಾಡುವ ಸಮಯ ಬಂದಿದೆ. ಕಾಂಗ್ರೆಸ್ ಅಭ್ಯರ್ಥಿ ಯೋಗ್ಯನಾಗಿದ್ದು, ಈ ಬಾರಿ ಕಾಂಗ್ರೆಸ್ ಗೆಲುವಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್, ಶಿವರುದ್ರ ಹಟ್ಟಿಹೊಳಿ, ಮಹಾಂತೇಶ್ ಮತ್ತಿಕೊಪ್ಪ, ಶಂಕರಗೌಡ ಪಾಟೀಲ, ಕಾರ್ತಿಕ್ ಪಾಟೀಲ್, ಮಹಾಂತೇಶ್ ನರಸನ್ನವರ, ಗೀತಾಬಾಯಿ ದೇಸಾಯಿ, ಎಂ.ಎಸ್. ಪಟ್ಟಣ, ಸಿ.ಬಿ.ಜಕ್ಕಣ್ಣವರ, ಈರಣ್ಣ ಸಾಲಿ, ಶಿವಾನಂದ ನಿಲಪ್ಪನವರ, ಆನಂದ್ ಕುರುಬುರ್ , ಬಸಪ್ಪ ಮಾಳಗಿ, ಪತ್ರಯ್ಯ ಹಿರೇಮಠ, ವೆಂಕನಾಯ್ಕ್ ಪಾಟೀಲ, ಬಸವರಾಜ ಜಕಾತಿ, ಮಲ್ಲಿಕಾರ್ಜುನ ಕೆಂಗೇರಿ, ಲಕ್ಕಪ್ಪ ಶಿವಣ್ಣವರ್, ಹನುಮಂತ ತಳವಾರ್, ಯಲ್ಲಪ್ಪ ನಾಯ್ಕರ್, ಉಮೇಶ್ ಮರಗಲ್ಲ, ಮಹಾಂತೇಶ್ ಮರಗಲ್ಲ, ಲಕ್ಷ್ಮಣ್ ತಳವಾರ, ಸೋಮಪ್ಪ ಮರಗಲ್ಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.