*ಸಿಎಂ ಬದಲಾವಣೆ ಅವಶ್ಯಕತೆ ಇಲ್ಲದಿರುವ ವಿಷಯ: ಸಚಿವ ಶಿವಾನಂದ ಪಾಟೀಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಂದಿನ ಅವಧಿಯಲ್ಲೂ ಸಿಎಂ ಸಿದ್ದರಾಮಯ್ಯ ನಾಯಕತ್ವದ ಅವಶ್ಯಕತೆ ಇದೆ ಎಂಬ ಸಚಿವರ ಹೇಳಿಕೆಗೆ ಸಕ್ಕರೆ ಸಚಿವ ಶಿವಾನಂದ ಪಾಟೀಲ ಪ್ರತಿಕ್ರಿಯಿಸಿದ್ದು, ಇಲ್ಲ ಅಂತಾ ಯಾರು ಹೇಳಿದ್ದಾರೆ? ಈಗ ಅವರೇ ಮುಖ್ಯಮಂತ್ರಿಯಾಗಿ ಇದ್ದಾರಲ್ಲವೇ..? ಮುಂದೆಯೂ ಅವರೇ ಇರಬಹುದು. ಅದರಲ್ಲಿ ತಪ್ಪೇನಿದೆ ಎಂದಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಯಾರು ಹೇಳುತ್ತಿದ್ದಾರೆ..? ನೀವು ಕೇಳ್ತಾನೆ ಇದ್ದೀರಿ ಆ ರೀತಿ ಚರ್ಚೆ ಆಗುತ್ತಿದೆ. ಇನ್ನು ಯಾರು ಆ ರೀತಿ ಮಾತಾಡಿದ್ದಾರೆ ಅವರನ್ನೆ ಕೇಳಿ. ನಾನಂತೂ ಆ ಬಗ್ಗೆ ಮಾತಾಡಿಲ್ಲ ಎಂದರು.
ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರಾ ಎಂಬುದಕ್ಕೆ ಸಿಎಂ ವಿಚಾರ ನಾನು ಭವಿಷ್ಯ ನುಡಿಯುವಂತದ್ದಲ್ಲ. ಸಿಎಂ ಬದಲಾವಣೆಯನ್ನ ಸಿಎಲ್ಪಿ ಮತ್ತು ಹೈಕಮಾಂಡ್ ನಿರ್ಧರಿಸುತ್ತದೆ. ಇನ್ನು ಪದೇ ಪದೇ ಯಾಕೆ ಚರ್ಚೆ ಆಗುತ್ತಿರುವುದು ನನಗೆ ಗೊತ್ತಿಲ್ಲ, ನೀವೆ ಪದೇ ಪದೇ ಕೇಳುತ್ತೀರಿ ಅಂತಾ ಚರ್ಚೆ ಆಗುತ್ತಿದೆ. ಹಾಗಾಗಿ, ಅವಶ್ಯಕತೆ ಇಲ್ಲದಿರೋದನ್ನು ಚರ್ಚಿಸಿದರೆ ಏನು ಉಪಯೋಗವಿಲ್ಲ ಎಂದರು.
ಬೆಳಗಾವಿ ಖಾಸಗಿ ಎಪಿಎಂಸಿ ಗೊಂದಲದ ಬಗ್ಗೆ ಮಾತನಾಡಿದ ಶಿವಾನಂದ ಪಾಟೀಲ ಅವರು, ಲೋಕಸಭೆಯಲ್ಲಿ ಎಪಿಎಂಸಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿದ್ದರಿಂದ ರಾಜ್ಯದಲ್ಲಿ ಈ ರೀತಿ 4 ಖಾಸಗಿ ಎಪಿಎಂಸಿಗಳಿವೆ. ಬೇರೆ ಕಾಯ್ದೆ ಜಾರಿಗೆ ತಂದು ಅವುಗಳನ್ನು ರದ್ದುಡಿಸುತ್ತೇವೆ. ನೂರಕ್ಕೆ ನೂರರಷ್ಟು ಈ ಗೊಂದಲ ಬಗೆಹರಿಸಿ, ಸರ್ಕಾರಿ ಎಪಿಎಂಸಿಗಳನ್ನು ಉಳಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸಕ್ಕರೆ ಕಾರ್ಖಾನೆಗಳಲ್ಲಿ ಸರ್ಕಾರದಿಂದ ತೂಕದ ಯಂತ್ರ ಅಳವಡಿಸುವುದು ವಿಳಂಬ ಆಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಎರಡು ತರಹದ ಯಂತ್ರಗಳು ಇರುತ್ತವೆ. ಮೊದಲಿಗೆ ಅನ್ ಲಾಗ್ ಸಿಸ್ಟಮ್ ಡಿಜಿಟಲೈಸ್ ಮಾಡಿದ್ದೇವೆ. ಈಗಾಗಲೇ 72 ಕಾರ್ಖಾನೆಗಳಲ್ಲಿ ಈ ರೀತಿ ಕ್ರಮ ವಹಿಸಲಾಗಿದೆ. ಇನ್ನು ಆರಂಭದಲ್ಲಿ 10 ಕಡೆ ತೂಕದ ಯಂತ್ರ ಅಳವಡಿಸಲು ತೀರ್ಮಾನಿಸಿದ್ದೇವೆ. ಅದರಲ್ಲಿ 2 ಮೊಬೈಲ್ ಯೂನಿಟ್ ಹಾಕುತ್ತೇವೆ. ಬಳಿಕ ಹೆಚ್ಚು ಕಾರ್ಖಾನೆಗಳು ಇರುವಲ್ಲಿ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಐದಾರು ಸ್ಥಳಗಳನ್ನು ಗುರುತಿಸಿದ್ದೇವೆ. ಇನ್ನುಳಿದ ಸ್ಥಳಗಳನ್ನು ಗುರುತಿಸಿ ಬರುವ ಹಂಗಾಮಿನಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಶಿವಾನಂದ ಪಾಟೀಲ ಭರವಸೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ