Latest

ಇಡೀ ಜೀವನವನ್ನು ಜೈಲಿನಲ್ಲೇ ಕಳೆಯಲು ಸಿದ್ಧ ಎಂದ ಈಶ್ವರಪ್ಪ

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಕಾಶಿ ಮತ್ತು ಮಥುರಾದಲ್ಲಿ ಮಸೀದಿಗಳ ಜಾಗದಲ್ಲಿ ದೇವಸ್ಥಾನಗಳನ್ನು ನಿರ್ಮಿಸಬೇಕು ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಈಶ್ವರಪ್ಪನವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿರುವ ಈ ಈಶ್ವರಪ್ಪ, ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನನ್ನ ಇಡೀ ಜೀವನವನ್ನು ಬೇಕಾದರೂ ಜೈಲಿನಲ್ಲೇ ಕಳೆಯಲು ಸಿದ್ಧನಿದ್ದೇನೆ ಎಂದಿದ್ದಾರೆ.

ನಾನು ಕಾಶಿ ಮತ್ತು ಮಥುರಾಕ್ಕೆ ಭೇಟಿ ನೀಡಿದ್ದೇನೆ. ಕೃಷ್ಣ ದೇವಾಲಯವನ್ನು ಒಡೆದು ಮಸೀದಿ ಕಟ್ಟಿರುವುದನ್ನು ನಾನು ನೋಡಿದ್ದೇನೆ. ಕಾಶಿಯಲ್ಲಿಯೂ ವಿಶ್ವನಾಥನ ದೇವಾಲಯ ಧ್ವಂಸ ಮಾಡಿ ಮಸೀದಿ ನಿರ್ಮಿಸಲಾಗಿದೆ. ಅದನ್ನು ನೋಡಿ ನನಗೆ ನೋವಾಗಿದೆ, ಸಿಟ್ಟು ಕೂಡ ಬಂದಿದೆ. ಸರ್ಕಾರಗಳಿರುವುದು ಕೇವಲ ರಸ್ತೆ, ಚರಂಡಿ ನಿರ್ಮಾಣ ಮಾಡಲಿಕ್ಕೆ ಅಷ್ಟೇ ಅಲ್ಲ. ಈ ದೇಶದ ಜನರ ಅಪೇಕ್ಷೆಯಂತೆ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸವಾಗಿದೆ. ಅದರಂತೆ, ಈ ಎರಡೂ ಜಾಗದಲ್ಲಿಯೂ ಮಂದಿರ ನಿರ್ಮಾಣವಾಗಬೇಕು. ಇದು ಕೇವಲ ನನ್ನ ಭಾವನೆಯಷ್ಟೇ ಕೋಟ್ಯಂತರ ಹಿಂದೂ ಭಕ್ತರ ಭಾವನೆಗಳನ್ನು ನಾನು ಹೇಳಿದ್ದೇನೆ ಎಂದಿದ್ದಾರೆ.

Home add -Advt

Related Articles

Back to top button