*ದುಬಾರೆ ಆನೆ ಶಿಬಿರದಲ್ಲಿ ಕಾಳಗ: ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು*

ಪ್ರಗತಿವಾಹಿನಿ ಸುದ್ದಿ: ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಆನೆ ಶಿಬಿರದಲ್ಲಿ ಎರಡು ಸಾಕಾನೆಗಳ ನಡುವೆ ಭೀಕರ ಕಾಳಗ ನಡೆದು ಮಹಿಳೆ ಓರ್ವಳು ಸಾವನ್ನಪ್ಪಿದಳು, ಅದರ ಬೆನ್ನಲ್ಲೆ ಗಾಯಗೊಂಡಿದ ಆನೆ ಕೂಡ ಸಾವನ್ನಪ್ಪಿದೆ.
ನಿನ್ನೆ ಕಂಜನ್ ಮತ್ತು ಮರ್ತಾಂಡ ಎಂಬ ಆನೆಗಳ ನಡುವೆ ನಡೆದಿದ್ದ ಜಗಳದಲ್ಲಿ ಗಾಯಗೊಂಡಿದ್ದ ಸಾಕಾನೆ ಮಾರ್ತಾಂಡ ಇಂದು ಸಾವನ್ನಪ್ಪಿದೆ.
ನಿನ್ನೆ ದುಬಾರೆಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುವಾಗ ‘ಕಂಜನ್’ ಮತ್ತು ‘ಮಾರ್ತಾಂಡ’ ಆನೆಗಳ ನಡುವೆ ಜಗಳ ಆರಂಭವಾಗಿತ್ತು. ಈ ವೇಳೆ ಕಂಜನ್ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಮಾರ್ತಾಂಡ ಆನೆ ನಿಯಂತ್ರಣ ತಪ್ಪಿ ನದಿಗೆ ಬಿದ್ದಿತ್ತು. ಕಾಳಗದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಾರ್ತಾಂಡ ಆನೆಗೆ ತಜ್ಞ ಪಶುವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಮಾರ್ತಾಂಡ ಸಾವನ್ನಪ್ಪಿದೆ.
ಇದೇ ಸಂದರ್ಭದಲ್ಲಿ ಆನೆಗಳ ಕಾಳಗದಿಂದ ಹೆದರಿ ಓಡುತ್ತಿದ್ದ ಚೆನ್ನೈ ಮೂಲದ ಜಿನ್ನು (33) ಎಂಬ ಮಹಿಳಾ ಪ್ರವಾಸಿಗರು ಆನೆಯ ಕಾಲಿನಡಿ ಸಿಲುಕಿ ದುರಂತವಾಗಿ ಸಾವನ್ನಪ್ಪಿದ್ದರು. ಅವರ ಪತಿ ಮತ್ತು ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು.
ಘಟನೆಯ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಸುರಕ್ಷತೆಯ ದೃಷ್ಟಿಯಿಂದ ಶಿಬಿರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.


