ಪ್ರೇಮಿಗಳ ಆತ್ಮಹತ್ಯೆಗೆ ಕಾರಣವಾದ ತಪ್ಪು ಕಲ್ಪನೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಸಣ್ಣದೊಂದು ತಪ್ಪುಕಲ್ಪನೆ ಪ್ರೇಮಿಗಳನ್ನು ಬಲಿ ತೆಗೆದುಕೊಂಡಿದೆ.
ಪಶ್ಚಿಮ ಬಂಗಾಳ ಮೂಲದ ಧಾರಾ ಸಂಶುಕಾ ಹಾಗೂ ದೀಪೇಂದ್ರಕುಮಾರ್ ಆತ್ಮಹತ್ಯೆ ಮಾಡಿಕೊಂಡವರು. ಇವರಿಬ್ಬರೂ ಬೆಂಗಳೂರಿನಲ್ಲಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಹಜವಾಗಿ ಇಬ್ಬರಲ್ಲೂ ಪ್ರೇಮಾಂಕುರವಾಗಿ ಜತೆಯಾಗಿ ಸುತ್ತುತ್ತ, ಸೆಲ್ಫಿ ತೆಗೆದುಕೊಳ್ಳುತ್ತ ಜಾಲಿಯಾಗೇ ಇದ್ದರು.
ಏತನ್ಮಧ್ಯೆ ಮಾರತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೀಪೇಂದ್ರಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದ. ಸಂಶುಕಾರನ್ನು ಅವರ ಪಾಲಕರು ಪುನಃ ಪಶ್ಚಿಮ ಬಂಗಾಳದ ಊರಿಗೆ ಕರೆದೊಯ್ದಿದ್ದು ಆಕೆ ಇಲ್ಲದೆ ತಾನು ಬದುಕಲಾರೆ ಎಂದು ಆತ್ಮಹತ್ಯೆಗೆ ಮುನ್ನ ಮಿತ್ರರಿಗೆ ಮೆಸೇಜ್ ಹಾಕಿದ್ದ.
ಮೂಲಗಳ ಪ್ರಕಾರ ಸಂಶುಕಾ ಕೆಲ ದಿನಗಳ ಹಿಂದೆ ದೀಪೇಂದ್ರ ಕುಮಾರ್ ಗೆ “ನಾನು ಇನ್ನು ಮುಂದೆ ನಿನಗೆ ಭೇಟಿಯಾಗುವುದಿಲ್ಲ. ನನ್ನ ಕುಟುಂಬದವರು ಬೇರೊಬ್ಬನೊಂದಿಗೆ ಮದುವೆ ಮಾಡಿಸಲು ನಿರ್ಧರಿಸಿದ್ದು ಊರಿಗೆ ಕರೆದೊಯ್ಯಲಿದ್ದಾರೆ” ಎಂದು ಹೇಳಿದ್ದರೆನ್ನಲಾಗಿದೆ. ಇದನ್ನು ಸತ್ಯವೆಂದು ನಂಬಿ ದೀಪೇಂದ್ರಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಲಾಗಿದೆ.
ದೀಪೇಂದ್ರಕುಮಾರ್ ಸಾವಿನ ಸುದ್ದಿ ತಿಳಿದ ಸಂಶುಕಾ ಕೂಡ ನಿರ್ಮಾಣ ಹಂತದ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎರಡೂ ಪ್ರಕರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




